ನವದೆಹಲಿ/ಅಹಮದಾಬಾದ್: ವಿವಿಧ ಬ್ಯಾಂಕ್ಗಳಿಗೆ ₹2,654 ಕೋಟಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಡೋದರಾದ ಡೈಮಂಡ್ ಪವರ್ ಇನ್ಫ್ರಾಸ್ಟ್ರಕ್ಟರ್ ಲಿಮಿಟೆಡ್’ (ಡಿಪಿಐಎಲ್) ಕಂಪನಿ ವಿರುದ್ಧ ಸಿಬಿಐ ಕ್ರಿಮಿನಲ್ ಪ್ರಕರಣ ದಾಖಲಿಸಿದೆ.
ಡಿಪಿಐಎಲ್ ಕಂಪನಿಯು ಎಲೆಕ್ಟ್ರಿಕಲ್ ಕೇಬಲ್ ಮತ್ತು ಸಾಮಗ್ರಿಗಳನ್ನು ತಯಾರಿಸುತ್ತದೆ. ಎಸ್.ಎನ್. ಭಟ್ನಾಗರ್ ಹಾಗೂ ಅವರ ಪುತ್ರರಾದ ಅಮಿತ್ ಭಟ್ನಾಗರ್ ಮತ್ತು ಸುಮಿತ್ ಭಟ್ನಾಗರ್ ಈ ಕಂಪನಿಯ ಪ್ರವರ್ತಕರಾಗಿದ್ದಾರೆ.
ಕಂಪನಿಯ ಅಧಿಕಾರಿಗಳು ಮತ್ತು ನಿರ್ದೇಶಕರ ಕಚೇರಿ ಮತ್ತು ನಿವಾಸದಲ್ಲಿಯೂ ಶೋಧ ಕಾರ್ಯ ನಡೆಸಲಾಗಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.
2008ರಿಂದ 11 ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್ಗಳಲ್ಲಿ ವಂಚನೆ ಮೂಲಕ ಈ ಕಂಪನಿ ಸಾಲ ಪಡೆದಿದೆ. 2016ರ ಜೂನ್ ಹೊತ್ತಿಗೆ 2,654 ಕೋಟಿ ಸಾಲ ಪಾವತಿಸಬೇಕಾಗಿತ್ತು. 2016–17ರಲ್ಲಿ ಈ ಮೊತ್ತವನ್ನು ವಸೂಲಾಗದ ಸಾಲ ಎಂದು ಘೋಷಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ ಘೋಷಿಸಿದ್ದ ಸುಸ್ತಿದಾರರ ಪಟ್ಟಿಯಲ್ಲಿ ಕಂಪನಿ ಮತ್ತು ಅದರ ನಿರ್ದೇಶಕರ ಹೆಸರುಗಳು ಇದ್ದರೂ ಸಾಲ ಪಡೆಯುವಲ್ಲಿ ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಅಧಿಕಾರಿಗಳು ಯಶಸ್ವಿಯಾಗಿದ್ದರು. ವಿವಿಧ ಬ್ಯಾಂಕ್ಗಳ ಅಧಿಕಾರಿಗಳ ಜತೆ ಶಾಮೀಲಾಗಿ ಸಾಲ ಪಡೆದಿದ್ದರು ಎಂದು ಆರೋಪಿಸಲಾಗಿದೆ.