ಚೆನ್ನೈ: ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಚೆನ್ನೈ–ಬೆಂಗಳೂರು ನಡುವಣ ಏರ್ಏಷ್ಯಾ ವಿಮಾನಯಾನ ಸೇವೆ ಪುನರಾರಂಭವಾಗಿದೆ.
ಟಾಟಾ ಮತ್ತು ಏರ್ಏಷ್ಯಾ ಜಂಟಿ ಸಹಭಾಗಿತ್ವದಲ್ಲಿ ಚೆನ್ನೈ–ಬೆಂಗಳೂರು, ಚೆನ್ನೈ–ಭುವನೇಶ್ವರ್ ನಡುವೆ ನಿತ್ಯ ಒಟ್ಟು ಐದು ವಿಮಾನಗಳು ಸಂಚರಿಸಲಿವೆ. ಬೆಂಗಳೂರಿನಿಂದ ಚೆನ್ನೈಗೆ ಮೊದಲ ವಿಮಾನ ಬೆಳಿಗ್ಗೆ 7.25ಕ್ಕೆ ಹೊರಡಲಿದೆ.
ಮೂರು ವಿಮಾನಗಳು ಚೆನ್ನೈ–ಬೆಂಗಳೂರು ನಡುವೆ, ಎರಡು ಚೆನ್ನೈ– ಭುವನೇಶ್ವರದ ನಡುವೆ ಸಂಚರಿಸಲಿವೆ.
‘ನಾವು ಪುನಃ ಸೇವೆ ಆರಂಭಿಸಿದ್ದೇವೆ. ಚೆನ್ನೈ–ಬೆಂಗಳೂರು, ಚೆನ್ನೈ–ಭುವನೇಶ್ವರಕ್ಕೆ ಏರ್ಏಷ್ಯಾ ವಿಮಾನಗಳು ಸಂಚರಿಸಲಿವೆ’ ಎಂದು ಏರ್ಏಷ್ಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮರ್ ಅಬ್ರೊಲ್ ತಿಳಿಸಿದ್ದಾರೆ. ‘ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಚೆನ್ನೈ–ಬೆಂಗಳೂರು ನಡುವೆ ನಮ್ಮ ವಿಮಾನಗಳು ಸಂಚರಿಸಲಿವೆ. ಚೆನ್ನೈ–ಭುವನೇಶ್ವರ ಹೊಸ ಮಾರ್ಗದಲ್ಲೂ ಸೇವೆ ಆರಂಭಿಸಿದ್ದೇವೆ. ಶನಿವಾರದಿಂದಲೇ ಸೇವೆ ಆರಂಭವಾಗಿದೆ’ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪ್ರಸ್ತುತ ಬೆಂಗಳೂರಿನಿಂದ ನವದೆಹಲಿ, ಕೋಲ್ಕತ್ತ, ಕೊಚ್ಚಿ, ಗೋವಾ, ಜೈಪುರ, ಚಂಡೀಗಡ, ಪುಣೆ, ಗುವಾಹಟಿ, ಇಂಪಾಲ್, ವಿಶಾಖಪಟ್ಟಣ, ಹೈದರಾಬಾದ್, ಶ್ರೀನಗರ, ರಾಂಚಿ ಸೇರಿದಂತೆ ಒಟ್ಟು 16 ವಿವಿಧ ಮಾರ್ಗಗಳಿಗೆ ಸೇವೆ ಆರಂಭಿಸಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.