ಬಾಸ್ಟನ್ (ಅಮೆರಿಕ): `ಮಂದಾರ ನ್ಯೂ ಇಂಗ್ಲೆಂಡ್ ಕನ್ನಡ ಕೂಟ~ ಈಗ 40ನೇ ವರ್ಷಕ್ಕೆ ಕಾಲಿಟ್ಟಿದ್ದು, ಇದೇ 6 ಮತ್ತು 7 ರಂದು ಎರಡು ದಿನಗಳ ವೈವಿಧ್ಯಮಯ ಸಂಭ್ರಮಾಚರಣೆ ಏರ್ಪಡಿಸಿದೆ.
ಮಂದಾರವನ್ನು ಮೊಟ್ಟಮೊದಲು `ನ್ಯೂ ಇಂಗ್ಲೆಂಡ್ ಕನ್ನಡ ಕೂಟ~ ಹೆಸರಿನೊಂದಿಗೆ ಪ್ರೊ. ಸೂರಿ ಮತ್ತು ಅವರ ಪತ್ನಿ ಇಂದುಶ್ರೀ ಅಧ್ಯಕ್ಷತೆಯಲ್ಲಿ ಸಮಾನ ಮನಸ್ಕ ಕನ್ನಡಿಗರು ರೋಡ ಐಲ್ಯಾಂಡ್ ರಾಜ್ಯದಲ್ಲಿ ಆರಂಭಿಸಿದರು. ಆ ನಂತರ ಬಾಸ್ಟನ್ ನಗರವು ಕನ್ನಡ ಕೂಟಕ್ಕೆ ಪ್ರಧಾನ ಕೇಂದ್ರವಾಗಿದೆ.
ಈಗ ಮಂದಾರದ ಆಶ್ರಯದಲ್ಲಿ ಸುಮಾರು 250 ಕನ್ನಡ ಕುಟುಂಬಗಳು ನೋಂದಾಯಿತಗೊಂಡಿದ್ದು 800ಕ್ಕೂ ಹೆಚ್ಚಿನ ಸದಸ್ಯರು ಇದ್ದಾರೆ. ಸಂಘ ಕಟ್ಟಿ ಬೆಳೆಸಿರುವ ಕಾರ್ಯಕಾರಿ ಸಮಿತಿಯು, ಪ್ರವೀಣ ನಡುತೋಟ ಅವರ ಅಧ್ಯಕ್ಷತೆಯಲ್ಲಿ ಸಮಾರಂಭದ ಯಶಸ್ಸಿಗೆ ಶ್ರಮಿಸುತ್ತಿದೆ.
ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆಅವರು ಸಮಾರಂಭ ಉದ್ಘಾಟಿಸಲಿದ್ದಾರೆ. `ದೀವಿಗೆ~ ಹೆಸರಿನ ಸ್ಮರಣ ಸಂಚಿಕೆ ಬಿಡುಗಡೆಯಾಗಲಿದೆ ಎಂದು `ಮಂದಾರ ರತ್ನ ಮಹೋತ್ಸವ~ ಸಮಿತಿ ಪರವಾಗಿ ವೈಶಾಲಿ ಹೆಗಡೆ ಅವರು ತಿಳಿಸಿದ್ದಾರೆ.