ನವದೆಹಲಿ (ಪಿಟಿಐ): ಬೆಲೆ ಏರಿಕೆಗೆ ಕಡಿವಾಣ ಹಾಕಲು ತನ್ನ ಬಳಿ ಮಾಂತ್ರಿಕ ದಂಡ ಇಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಅಸಹಾಯಕತೆ ವ್ಯಕ್ತಪಡಿಸಿದೆ.
ಒಂದೂವರೆ ವರ್ಷದಲ್ಲಿ 10 ಬಾರಿ ಅಲ್ಪಾವಧಿ ಬಡ್ಡಿ ದರಗಳನ್ನು ಹೆಚ್ಚಿಸಿದ್ದರೂ, ವಾರ್ಷಿಕ ಹಣದುಬ್ಬರ ನಿಯಂತ್ರಿಸಲು ಕೇಂದ್ರೀಯ ಬ್ಯಾಂಕ್ನಿಂದ ಸಾಧ್ಯವಾಗದಿರುವುದನ್ನು ಡೆಪ್ಯುಟಿ ಗವರ್ನರ್ ಕೆ. ಸಿ. ಚಕ್ರವರ್ತಿ ಒಪ್ಪಿಕೊಂಡಿದ್ದಾರೆ.
ಅವಶ್ಯಕ ಸರಕುಗಳ ವಾರ್ಷಿಕ ಹೆಚ್ಚಳ ದರವು ನಿಯಂತ್ರಣಕ್ಕೆ ಬರಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ, ಈ ವಿದ್ಯಮಾನಕ್ಕೆ ಕಡಿವಾಣ ವಿಧಿಸಲು ಕೇಂದ್ರ ಹಣಕಾಸು ಸಚಿವಾಲಯ ಇಲ್ಲವೇ `ಆರ್ಬಿಐ~ ಬಳಿ ಯಾವುದೇ ಮಂತ್ರ ದಂಡ ಇಲ್ಲ ಎಂದು ಚಕ್ರವರ್ತಿ ಅಭಿಪ್ರಾಯಪಟ್ಟಿದ್ದಾರೆ. ಅಸೋಚಾಂ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಸದ್ಯದ ಹಣದುಬ್ಬರಕ್ಕೆ ಆಹಾರ ಪದಾರ್ಥಗಳ ಪೂರೈಕೆ ಅಭಾವವೇ ಮುಖ್ಯ ಕಾರಣವಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಉತ್ಪಾದನೆ ಹೆಚ್ಚಿಸಿದರೆ ಮಾತ್ರ ಬೆಲೆ ಏರಿಕೆಗೆ ಕಡಿವಾಣ ವಿಧಿಸಲು ಸಾಧ್ಯ. ಕೃಷಿ ಉತ್ಪಾದನೆ ಹೆಚ್ಚಿಸಿದರೆ ಮಾತ್ರ ಬೆಲೆ ಇಳಿಯಬಹುದು. ಇಲ್ಲದಿದ್ದರೆ ಹಣದುಬ್ಬರವು ನಿಯಂತ್ರಣಕ್ಕೆ ಸಿಗುವುದಿಲ್ಲ ಎಂದರು.