ಜೈಪುರ (ಪಿಟಿಐ): ದೇಶದ ಬಹು ಬ್ರಾಂಡ್ ಚಿಲ್ಲರೆ ವಹಿವಾಟು ಕ್ಷೇತ್ರದಲ್ಲಿ ಶೇ 51ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್ಡಿಐ) ಅವಕಾಶ ಕಲ್ಪಿಸುವುದರಿಂದ ಆಹಾರ ಹಣದುಬ್ಬರವನ್ನು ಗಣನೀಯವಾಗಿ ತಗ್ಗಿಸಲು ಸಾಧ್ಯ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಅಭಿಪ್ರಾಯಪಟ್ಟಿದೆ.
ಆದರೆ, `ಎಫ್ಡಿಐ~ ಅನ್ನು ಪರಿಣಾಮಕಾರಿಯಾಗಿ ಮತ್ತು ಸಮರ್ಥವಾಗಿ ಜಾರಿಗೊಳಿಸುವುದರಿಂದ ಮಾತ್ರ ಇದು ಸಾಧ್ಯ. `ಎಫ್ಡಿಐ~ನ ನಿಜವಾದ ಫಲಗಳು ಗ್ರಾಹರಿಗೆ ವರ್ಗಾವಣೆ ಆದಾಗ, ಬೆಲೆಗಳು ಇಳಿದು, ಹಣದುಬ್ಬರ ಹಿತಕರ ಮಟ್ಟಕ್ಕೆ ಇಳಿಯಲಿವೆ. ಇದು ಜಾಗತಿಕ ಮಟ್ಟದಲ್ಲಿ ರೂಢಿಯಲ್ಲಿರುವ ಕ್ರಮ ಎಂದು `ಆರ್ಬಿಐ ಡೆಪ್ಯುಟಿ ಗವರ್ನರ್ ಕೆ.ಸಿ ಚಕ್ರವರ್ತಿ ಹೇಳಿದ್ದಾರೆ.
ಶನಿವಾರ ಇಲ್ಲಿ ಎಚ್ಡಿಎಫ್ಸಿ ಬ್ಯಾಂಕ್ ಮತ್ತು ವೋಡಾಫೋನ್ ಸಂಸ್ಥೆ ಜಂಟಿಯಾಗಿ ಆಯೋಜಸಿದ್ದ `ಎಂ-ಪೈಸಾ~ ಕಾರ್ಯುಕ್ರಮದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಸದ್ಯ ಹಣದುಬ್ಬರ ದರ ಗರಿಷ್ಠ ಮಟ್ಟದಲ್ಲಿ ಇರುವುದರಿಂದ ವರ್ಷಾಂತ್ಯಕ್ಕೆ ಆರ್ಥಿಕ ವೃದ್ಧಿ ದರ (ಜಿಡಿಪಿ) ಶೆ 7ರಷ್ಟು ಇರಲಿದೆ. ಹಣದುಬ್ಬರ ಏರಿಕೆಗೆ ಪೂರೈಕೆ ಸರಪಣಿ ಲೋಪಗಳು ಕಾರಣ. ಇದನ್ನು ತಗ್ಗಿಸಬೇಕಾದರೆ `ಎಫ್ಡಿಐ~ನಂತ ಕ್ರಮಗಳು ಅಗತ್ಯ ಎಂದರು.
ಶೇ 51ರಷ್ಟು `ಎಫ್ಡಿಐ~ದಿಂದ ಶೈತ್ಯಾಗಾರಗಳ ನಿರ್ಮಾಣದಂತ ಪೂರಕ ಮೂಲಸೌಕರ್ಯ ಯೋಜನೆಗಳಿಗೆ ವಿದೇಶಿ ಕಂಪೆನಿಗಳು ಬಂಡವಾಳ ಹೂಡಬಹುದು. ಇದರಿಂದ ಮುಂದಿನ 3 ವರ್ಷಗಳಲ್ಲಿ 1 ಕೋಟಿಗಳಷ್ಟು ಉದ್ಯೋಗಾವಕಾಶ ಸೃಷ್ಟಿಯಾಗಲಿವೆ. ಸದ್ಯ ಶೈತ್ಯಾಗಾರದ ಕೊರತೆಯಿಂದ ದೇಶದಲ್ಲಿ 1 ಲಕ್ಷ ಕೋಟಿಗಳಷ್ಟು ಮೊತ್ತದ ಸರಕುಗಳು ಪೋಲಾಗುತ್ತಿವೆ ಎಂದರು.