ಅಸ್ಥಿರತೆಯು ಇಂದಿನ ದಿನಗಳಲ್ಲಿ ಎಲ್ಲ ವಲಯಗಳಲ್ಲೂ ತಾಂಡವಾಡುತ್ತಿದ್ದು, ವಿಶೇಷವಾಗಿ ಷೇರುಪೇಟೆಗಳಲ್ಲಿ ಇದು ತುಸು ಹೆಚ್ಚಿಗೆ ಇದೆ. ಕಳೆದ ವಾರ ಪ್ರಕಟವಾದ ಕೈಗಾರಿಕಾ ಉತ್ಪಾದನಾ ಸೂಚ್ಯಂಕವು ಅಕ್ಟೋಬರ್ ತಿಂಗಳಲ್ಲಿ ಶೇ 8.2ರ ಪ್ರಗತಿ ಕಂಡಿದೆ ಎಂಬ ಅಂಶವು ಉತ್ತೇಜನಕಾರಿಯಾಗಲಿಲ್ಲ. ಲೋಕಸಭೆಯಲ್ಲಿ ಬ್ಯಾಂಕಿಂಗ್ ಮಸೂದೆಗೆ ಅಂಗೀಕಾರ ದೊರೆಯುವ ಸುದ್ದಿಯ ಕಾರಣ, ಬ್ಯಾಂಕಿಂಗ್ ವಲಯವು ವಾರದ ಆರಂಭದಿಂದ ಗುರುವಾರದವರೆಗೂ ಏರಿಕೆ ಕಂಡಿತು.
ಆದರೆ ಗುರುವಾರ ಅಂತಿಮ ಒಂದು ಗಂಟೆಯ ಅವಧಿಯು ಬ್ಯಾಂಕಿಂಗ್ ಷೇರುಗಳನ್ನು ತತ್ತರಿಸುವಂತೆ ಮಾಡಿತು. ಕರ್ನಾಟಕ ಬ್ಯಾಂಕ್ ವಿಶೇಷವಾಗಿ ಸುಮಾರು 15% ರಷ್ಟು ಕುಸಿತಕ್ಕೊಳಗಾಯಿತು. ಹಣದುಬ್ಬರದ ಪ್ರಮಾಣವು ಶೇ 7.24 ಹಂತದಲ್ಲಿದ್ದುದು ಪೇಟೆಯಲ್ಲಿ ವಿಶೇಷವಾಗಿ ಬ್ಯಾಂಕಿಂಗ್ ವಲಯದ ಷೇರುಗಳನ್ನು ಸ್ವಲ್ಪಮಟ್ಟಿಗೆ ಚೇತರಿಸಿಕೊಳ್ಳುವಂತೆ ಮಾಡಿತು. ಕಾರಣ ಮುಂದಿನ ದಿನಗಳಲ್ಲಿ ಕೈಗೊಳ್ಳಬಹುದಾದ ಕ್ರಮಗಳು ಪೇಟೆಯಲ್ಲಿ ಚೇತರಿಕೆ ಮೂಡಿಸಬಹುದೆಂಬ ನಿರೀಕ್ಷೆ. ಕಳೆದ ವಾರದಲ್ಲಿ ಸರ್ಕಾರವು ಎನ್ಎಂಡಿಸಿ ಷೇರುಗಳನ್ನು ಷೇರು ವಿನಿಮಯ ಕೇಂದ್ರಗಳ ಮೂಲಕ ಮಾರಾಟ ಮಾಡಿ ಸುಮಾರುರೂ6,000 ಕೋಟಿ ಹಣ ಸಂಗ್ರಹಿಸುವಲ್ಲಿ ಯಶಸ್ಸು ಕಂಡಿತು.