ಶಿವಮೊಗ್ಗ: ‘ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸುವುದರಲ್ಲಿ ಸಿ.ಕೆ.ಜಾಫರ್ ಷರೀಫ್ ಅವರ ಪಾಲು ಹೆಚ್ಚಿನದ್ದು. ಆ ಪಕ್ಷಕ್ಕೆ ಅವರು ಈಗ ಬೇಡವಾಗಿದ್ದಾರೆ. ಜೆಡಿಎಸ್ಗೆ ಅವರನ್ನು ಕರೆದುಕೊಳ್ಳಲು ದೇವೇಗೌಡರು ಸಿದ್ಧರಿದ್ದಾರೆ. ಆದರೆ, ಷರೀಫ್ ಅವರೇ ಈಗ ಮನಸ್ಸು ಮಾಡಬೇಕು’ ಎಂದು ಶಾಸಕ ಜಮೀರ್ ಅಹಮದ್ ಹೇಳಿದರು.
‘ಮುಸ್ಲಿಮರನ್ನು ಬಳಸಿ, ಬಿಸಾಡುವ ಪ್ರವೃತ್ತಿ ಮೊದಲಿನಿಂದಲೂ ಕಾಂಗ್ರೆಸ್ಗೆ ಇದೆ. ಸಾಮಾನ್ಯ ಮುಖಂಡನಾಗಿದ್ದ ನನ್ನನ್ನು ಈ ಮೊದಲು ಕರೆಯದ ಕಾಂಗ್ರೆಸ್, ಎರಡು ಬಾರಿ ಶಾಸಕ, ಒಮ್ಮೆ ಮಂತ್ರಿಯಾದ ಮೇಲೆ ಆಹ್ವಾನ ನೀಡಿತ್ತು’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ರಾಜ್ಯದಲ್ಲಿ ಈಗಾಗಲೇ ಮುಸ್ಲಿಮರು ಜೆಡಿಎಸ್ ಪರ ಇದ್ದಾರೆ. ಒಂದು ವೇಳೆ ಜಾಫರ್ ಷರೀಫ್ ಅವರು ಜೆಡಿಎಸ್ಗೆ ಬಂದರೆ ಶೇ 90ರಷ್ಟು ಮುಸ್ಲಿಮರು ಜೆಡಿಎಸ್ ಪರ ನಿಲ್ಲುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಜಮೀರ್ ಪ್ರತಿಕ್ರಿಯಿಸಿದರು.
ಶಿವಮೊಗ್ಗ, ಬಿಜೆಪಿ ಭದ್ರಕೋಟೆಯೇನೂ ಅಲ್ಲ. ವಾಸ್ತವ ಬೇರೆ ಇರುವುದರಿಂದ ಯಡಿಯೂರಪ್ಪ ಅವರು ಈ ಬಾರಿ ಸೋಲುವುದು ಖಚಿತ ಎಂದು ಹೇಳಿದರು.