ಬಾಗಲಕೋಟೆ: ‘ನಾಗರ ಪಂಚಮಿ ದಿನ ನಾಗರಕಲ್ಲಿಗೆ ಹಾಲೆರೆಯುವ ಬದಲು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು, ವೃದ್ಧರಿಗೆ ಹಾಲು ನೀಡುವ ಮೂಲಕ ನಾಗರ ಪಂಚಮಿ ಆಚರಿಸಲಾಗುವುದು’ ಎಂದು ಮಾನವ ಬಂಧುತ್ವ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಶೈಲ ಅಂಟಿನ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವೇದಿಕೆ ಸಂಸ್ಥಾಪಕ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಮೌಢ್ಯ ಮುಕ್ತ ಕರ್ನಾಟಕ ನಿರ್ಮಾಣ ಹಾಗೂ ಮೂಢನಂಬಿಕೆ ಹೋಗಲಾಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.
‘ನಾಗರ ಪಂಚಮಿ ದಿನ ಮಹಿಳೆಯರು ಹುತ್ತ ಹಾಗೂ ಹಾವಿನ ಮೂರ್ತಿಗಳಿಗೆ ಹಾಲೆರೆದು ಅಪಾರ ಪ್ರಮಾಣದ ಹಾಲು ಪೋಲು ಮಾಡುತ್ತಾರೆ. ಅದು ಮೌಢ್ಯ ಆಚರಣೆ. ಆಹಾರದ ನಷ್ಟ ದೇಶದ ನಷ್ಟ ಎಂದು ಮನವರಿಕೆ ಮಾಡಿಕೊಡಲಾಗುತ್ತಿದೆ’ ಎಂದು ಹೇಳಿದರು.
‘ರಾಜ್ಯದಲ್ಲಿ ಸಾವಿರಾರು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಅವರಿಗೆ ಹಾಲು ನೀಡಬೇಕು. ಜಿಲ್ಲೆಯಾದ್ಯಂತ ಹಾಸ್ಟೆಲ್ ವಿದ್ಯಾರ್ಥಿಗಳು, ಆಸ್ಪತ್ರೆಯಲ್ಲಿನ ರೋಗಿಗಳು, ಅಂಗನವಾಡಿ ಮಕ್ಕಳಿಗೆ ಹಾಲು ವಿತರಣೆ ಮಾಡಲಾಗುವುದು’ ಎಂದು ತಿಳಿಸಿದರು.
‘ಆಗಸ್ಟ್ 21ರಂದು ಜಿಲ್ಲಾ ಘಟಕದಿಂದ ಆಯಾ ತಾಲ್ಲೂಕಿನ ಸಂಚಾಲಕರ ನೇತೃತ್ವದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.
ಜಯರಾಜ ಹಾದಿಕಾರ, ಈರಣ್ಣ ಸುತಾರೆ, ಶಿವರಾಜ ಕಲಾದಗಿ, ವೆಂಕಣ್ಣ ಜಗ್ಗಲ, ಹನಮಂತ ಬೆಳಗಲಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.