ಬಾಗಲಕೋಟೆ: ‘ಬಾಗಲಕೋಟೆ ಲೋಕಸಭೆ ಕ್ಷೇತ್ರದಿಂದ ಪುತ್ರಿ ಸಂಯುಕ್ತಾ ಪಾಟೀಲಗೆ ಟಿಕೆಟ್ ನೀಡಿದರೆ ಸ್ಪರ್ಧಿಸುವರು’ ಎಂದು ಜವಳಿ, ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.
‘ಸಂಘರ್ಷದಿಂದ ಟಿಕೆಟ್ ತೆಗೆದುಕೊಳ್ಳುವುದಿಲ್ಲ. ಸಾಮರಸ್ಯದಿಂದ ಪಡೆಯುವೆ. 2009ರಲ್ಲಿ ಇಲ್ಲಿಂದ ಸ್ಪರ್ಧಿಸುವ ಆಸಕ್ತಿ ಇತ್ತು. 2014ರಲ್ಲಿ ಟಿಕೆಟ್ ಕೇಳಿದ್ದೆ. ಪಕ್ಕದ ಜಿಲ್ಲೆಯವರು ಎಂದಾಗ ಅಸಮಾಧಾನ ಸಹಜ. ಚುನಾವಣೆ ಪ್ರಕ್ರಿಯೆಯಲ್ಲಿ ಎಲ್ಲರಿಗೂ ಟಿಕೆಟ್ ಸಿಗುವುದಿಲ್ಲ’ ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
‘ಟಿಕೆಟ್ ಆಕಾಂಕ್ಷಿಗಳ ಪೈಕಿ ಅಜಯಕುಮಾರ ಸರನಾಯಕ ಹಿರಿಯರು. ಕಳೆದ ಬಾರಿ ವೀಣಾ ಕಾಶಪ್ಪನವರ ಪರ ನಾನೇ ಜವಾಬ್ದಾರಿ ಹೊತ್ತು ಕಾರ್ಯನಿರ್ವಹಿಸಿದ್ದೇನೆ. ಯಾರಿಗೆ ಟಿಕೆಟ್ ಕೊಟ್ಟರೂ ಅವರ ಪರ ಕೆಲಸ ಮಾಡುವೆ. ನನಗೆ ವಿಜಯಪುರ, ಬಾಗಲಕೋಟೆ ಜಿಲ್ಲೆ ಪ್ರತ್ಯೇಕ ಎಂಬ ಭಾವನೆಯಿಲ್ಲ’ ಎಂದರು.