ಕೆರೂರ: ‘ಸುಳ್ಳು ಹೇಳಿ ಜನರನ್ನು ನಂಬಿಸಿ, ಅಧಿಕಾರ ಗದ್ದುಗೆ ಹಿಡಿದಿರುವ ಬಿಜೆಪಿಗೆ ಗ್ಯಾರಂಟಿ ಯೋಜನೆಗಳು ನಿದ್ದೆಗೆಡಿಸಿವೆ’ ಎಂದು ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಹೇಳಿದರು.
ಸಮೀಪದ ಮುಷ್ಠಿಗೇರಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರಚಾರ ಸಭೆ ನಡೆಸಿ ಮಾತನಾಡಿದರು.
‘ಶಕ್ತಿ ಯೋಜನೆಯಿಂದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರೆ, ಚಿತ್ರ ನಟಿ ಶ್ರುತಿ ಸಹ ಅಂಥದ್ದೇ ಟೀಕೆ ಮಾಡಿದ್ದಾರೆ. ಮಹಿಳೆಯಾಗಿ ಸ್ತ್ರೀ ಸಮೂಹಕ್ಕೆ ಅಪಮಾನ ಮಾಡಿರುವುದು ನಾಚಿಕೆಗೇಡು. ಯಾರಾದರೂ ಮಹಿಳೆ ದಾರಿ ತಪ್ಪಿದ ಉದಾಹರಣೆ ಇದೆಯಾ’ ಎಂದು ಪ್ರಶ್ನಿಸಿದರು.
‘ಲಕ್ಷಾಂತರ ಕುಟುಂಬಗಳಿಗೆ ಗ್ಯಾರಂಟಿ ಯೋಜನೆಗಳು ಆಸರೆಯಾಗಿವೆ. ಆದರೆ, ಬಿಜೆಪಿ ನಾಯಕರು ಸೋಲಿನ ಹತಾಶೆಯಿಂದ ಕೀಳುಮಟ್ಟದ ಹೇಳಿಕೆ ನೀಡುತ್ತಿದ್ದಾರೆ. ಸುಳ್ಳು ಹೇಳುವುದೇ ಅವರ ಕೆಲಸವಾಗಿದೆ’ ಎಂದು ಆರೋಪಿಸಿದರು.
ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿದರು, ಮಾಂತೇಶ ಹಟ್ಟಿ, ಶಿವು ಕೊನೇರಿ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪದ್ಮಾವತಿ ಡೊಳ್ಳಿನ, ಶಕುಂತಲಾ ಹರಣಶಿಕಾರಿ, ಭೀರಪ್ಪ ಪೆಂಟಿ, ಬಸಪ್ಪ ಹೊಸಮನಿ ಇದ್ದರು.