ಬಾದಾಮಿ: ‘12 ಶತಮಾನದ ಶರಣರು ಬರೆದ ವಚನಗಳು ನಮ್ಮ ಬದುಕಿಗೆ ಬೆಳಕು ನೀಡುತ್ತಿವೆ. ವಚನಗಳಲ್ಲಿಯ ಆದರ್ಶ ತತ್ವಗಳನ್ನು ಅರಿತುಕೊಳ್ಳಬೇಕು’ ಎಂದು ಬಾಗಲಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ. ಜಿ.ಜಿ. ಹಿರೇಮಠ ಹೇಳಿದರು.
ತಾಲ್ಲೂಕು ಆಡಳಿತದ ಆಶ್ರಯದಲ್ಲಿ ಶಿವಯೋಗಮಂದಿರ ಶಾಖಾ ಮಠದ ಕುಮಾರೇಶ್ವರ ಸಭಾ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡ ಶರಣ ಮಾಚಿದೇವರ ಜಯಂತಿ ಸಮಾರಂಭದಲ್ಲಿ ಶರಣ ಮಡಿವಾಳ ಮಾಚಿದೇವರ ಬದುಕು ಮತ್ತು ಸಾಹಿತ್ಯದ ಬಗ್ಗೆ ಅವರು ಉಪನ್ಯಾಸ ನೀಡಿದರು.
ತಹಶೀಲ್ದಾರ್ ಜೆ.ಬಿ. ಮಜ್ಜಗಿ ಸಮಾರಂಭಕ್ಕೆ ಚಾಲನೆ ನೀಡಿದರು. ಪಿಕಾರ್ಡ್ ಬ್ಯಾಂಕ್ ಆವರಣದಿಂದ ಶಿವಯೋಗಮಂದಿರ ಶಾಖಾ ಮಠದವರೆಗೆ ಮಾಡಿವಾಳ ಮಾಚಿದೇವರ ಭಾವಚಿತ್ರದ ಮೆರವಣಿಗೆ ನಡೆಯಿತು. ಮಹಿಳೆಯರು ಕುಂಭಗಳನ್ನು ಹೊತ್ತು ಸಾಗಿದರು.
ಎಸ್ಸೆಸ್ಸೆಲ್ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಅಡಿವೆಪ್ಪ ಮಡಿವಾಳರ, ಕೃಷ್ಣ ವೀರಗಂಟಿ, ಗೋವಿಂದಪ್ಪ ಮಡಿವಾಳರ, ಶಿವಾನಂದ ಮಡಿವಾಳರ, ಈರಣ್ಣ ಮಡಿವಾಳರ, ಮಲ್ಲಪ್ಪ ಮಡಿವಾಳರ, ಪುರಸಭೆ ಸದಸ್ಯರು ಮತ್ತು ಅಧಿಕಾರಿಗಳು ಇದ್ದರು. ಮೀನುಗಾರಿಕೆ ಇಲಾಖೆಯ ಸದಾಶಿವ ಮರಡಿ ಸ್ವಾಗತಿಸಿ ವಂದಿಸಿದರು.