ಅಮೀನಗಡ ಸಮೀಪದ ಸಿದ್ಧನಕೊಳ್ಳ ಹಾಗೂ ದಮ್ಮೂರ ಜಲಪಾತಗಳು ಮೈತುಂಬಿ ಹರಿಯುತ್ತಿದ್ದು ನೋಡುಗರ ಕಣ್ಮನ ಸೆಳೆಯುತ್ತಿವೆ. ಬರಗಾಲ ಕಾರಣದಿಂದ ಜೀವ ಸೆಲೆಯನ್ನು ಕಳೆದುಕೊಂಡಿದ್ದ ಕಿರು ಜಲಪಾತಗಳು ಈ ಬಾರಿ ನಿರಂತರವಾಗಿ ಸುರಿದ ವರ್ಷ ಧಾರೆಯಿಂದ ಭರ್ತಿಯಾಗಿ ಮೋಹಕವಾಗಿ ಕಂಗೊಳಿಸುತ್ತಿವೆ.
ಸುಮಾರು ವರ್ಷಗಳಿಂದ ಮಳೆ ಯಿಲ್ಲದೆ ಕಂಗಾಲಾಗಿದ್ದ ಜನತೆಗೆ ಹರ್ಷವನ್ನುಂಟು ಮಾಡಿದೆ. ಪ್ರವಾಸಿಗರು ಹಾಗೂ ಜಿಲ್ಲೆಯ ಜನ ತಂಡೋಪತಂಡವಾಗಿ ಆಗಮಿಸು ತ್ತಿದ್ದು, ಜಲಪಾತದ ಜಲಧಾರೆಯಲ್ಲಿ ಮಿಂದು ಉಲ್ಲಾಸಪಡುತ್ತಿದ್ದಾರೆ.
ಬಾಗಲಕೋಟೆ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ಹಳ್ಳ, ಕೆರೆ, ನದಿಗಳು ತುಂಬಿ ಹರಿಯುತ್ತಿವೆ. ದಮ್ಮೂರಿನ ಬೆಟ್ಟದ ಮೇಲಿರುವ ದಮ್ಮೂರು ದಿಡಗಿನ ಜಲಪಾತದ ಸೌಂದರ್ಯ ಸವಿಯುವುದೇ ಅದೃಷ್ಟ. ದಮ್ಮೂರಿನಲ್ಲಿ ದಿಡಗಿನ ಬಸವೇಶ್ವರ ದೇವಸ್ಥಾನವಿದೆ. ಈ ದೇವಾಲಯದ ಬಳಿ ಬೃಹದಾಕಾರದ ಆಲದ ಮರವಿದೆ.
ಬೆಟ್ಟಕ್ಕೆ ಹೊಂದಿಕೊಂಡಿರುವ ಆಲದಮರದಿಂದ ನೀರು ಸುರಿಯುತ್ತಿರುವುದು ಜಲಪಾತದಂತೆ ಕಂಡುಬರುತ್ತದೆ. ಜುಳು ಜುಳು ನೀರಿನ ಕಲರವ ಪ್ರವಾಸಿಗರ ಮನ ತಣಿಸುತ್ತದೆ.
ಸಿದ್ಧನಕೊಳ್ಳದಲ್ಲಿ ಬೆಟ್ಟದ ಮೇಲಿಂದ ಧುಮ್ಮಿಕ್ಕುವ ಜಲಧಾರೆಯಲ್ಲಿ ಯುವಕರು ನಲಿದಾಡುವ ದೃಶ್ಯ ಸಾಮಾನ್ಯವಾಗಿರುತ್ತದೆ.
ಇಲ್ಲಿನ ಇನ್ನೊಂದು ವಿಶೇಷ ವೆಂದರೆ, ಸಿದ್ಧನಕೊಳ್ಳ ನೀರಿನಲ್ಲಿ ಕುಣಿದಾಡಿದ ನಂತರ ಹಸಿವು ನೀಗಿಸಿಕೊಳ್ಳಲು ದಾಸೋಹಮಠದಲ್ಲಿ ಪ್ರಸಾದ ವ್ಯವಸ್ಥೆ ಇರುತ್ತದೆ. ಇನ್ನು ಸುತ್ತಮುತ್ತಲಿನ ಜನತೆ ಬುತ್ತಿ ಕಟ್ಟಿಕೊಂಡು ಬಂದು ಸ್ನಾನ ಪೂರೈಸಿ ಊಟಮಾಡಿಕೊಂಡು ಸಾಯಂಕಾಲ ವರೆಗೆ ಇದ್ದು ಪ್ರಕೃತಿಯನ್ನು ಸವಿದು ತೆರಳುತ್ತಾರೆ.
‘ಬತ್ತಿ ಹೋಗಿದ್ದ ಸಣ್ಣ ಪುಟ್ಟ ಜಲಪಾತಗಳು ಸಂಭ್ರಮದಿಂದ ನಳನಳಿಸುತ್ತಿವೆ. ಪ್ರಕೃತಿ ಪ್ರೇಮಿಗಳಿಗೆ ಸಂತಸ ಉಂಟುಮಾಡಿದೆ. ಐತಿಹಾಸಿಕ ಐಹೊಳೆಯಿಂದ 4 ಕಿ.ಮೀ. ದೂರದಲ್ಲಿ ಸಿದ್ಧನಕೊಳ್ಳ ಮತ್ತು 8 ಕಿ.ಮೀ. ದೂರದಲ್ಲಿ ದಮ್ಮೂರ ಇದೆ. ಇಲ್ಲಿಗೆ ಬರುವ ರಸ್ತೆ ಅಭಿವೃದ್ಧಿಪಡಿಸಿದರೆ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತದೆ’ ಎನ್ನುತ್ತಾರೆ ಛಾಯಾಗ್ರಾಹಕ ಶಂಕರ ಮಂಡಿ. ಶಿ.ಗು.ಹಿರೇಮಠ