ತೋರಣಗಲ್ಲು: ‘ಯಶಸ್ವಿ ರೈತರ ಯಶೋಗಾಥೆಗಳನ್ನು ರೈತರಿಗೆ ಹೇಳುವುದರ ಮೂಲಕ ಸಮಗ್ರ ಕೃಷಿ ಪದ್ಧತಿಯತ್ತ ರೈತರನ್ನು ಸೆಳೆಯಬೇಕು. ಜೊತೆಗೆ ತೋಟಗಾರಿಕಾ ಬೆಳೆಗಳಿಂದ ರೈತರಿಗೆ ನಿರಂತರ ಆದಾಯ ಬರುತ್ತದೆ’ ಎಂದು ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹ ಕೃಷಿ ವಿಸ್ತರಣಾ ನಿರ್ದೇಶಕ ಡಾ.ಎ.ಆರ್.ಕುರುಬರ್ ಹೇಳಿದರು.
ಇಲ್ಲಿನ ಒಪಿಜೆ ಕೇಂದ್ರದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು, ಕೃಷಿ ವಿಜ್ಞಾನ ಕೇಂದ್ರ ಹಗರಿ ಹಾಗೂ ಜಿಂದಾಲ್ ಫೌಂಡೇಷನ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಕೃಷಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಕೃಷಿ ದೇಶದ ಬೆನ್ನುಲುಬು ಆಗಿದ್ದರಿಂದ ಗ್ರಾಮೀಣ ಪ್ರದೇಶದ ಬಡ ರೈತರಿಗೆ ಕೃಷಿ ಆಧಾರಿತ ವಿವಿಧ ತರಬೇತಿ ಕಾರ್ಯಗಳು ಬಹಳ ಅವಶ್ಯ’ ಎಂದರು.
ಜಿಂದಾಲ್ ಕಾರ್ಖಾನೆಯ ಹಿರಿಯ ಉಪಾಧ್ಯಕ್ಷ ಸುನೀಲ್ರಾಲ್ಫ್ ಮಾತನಾಡಿ, ‘ಜಗತ್ತಿನ ಎಲ್ಲ ರಾಷ್ಟ್ರಗಳು ಕೃಷಿಯ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ಕೃಷಿಗೆ ಹೆಚ್ಚಿನ ಒತ್ತು ನೀಡುವುದಲ್ಲದೆ ಉತ್ತಮ ಬೆಳೆಗಳನ್ನು ಬೆಳೆಯಲು ಹೆಚ್ಚಿನ ಆಸಕ್ತಿ ತೋರಬೇಕು’ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಬಳ್ಳಾರಿ, ವಿಜಯನಗರ, ಕೊಪ್ಪಳ ಮತ್ತು ಚಿತ್ರದುರ್ಗ ಜಿಲ್ಲೆಗಳ ರೈತ ಉತ್ಪಾದಕ ಕಂಪನಿಗಳ 60ಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿಸಿದ್ದರು.
ಹಗರಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎಂ.ಆರ್.ಗೋವಿಂದಪ್ಪ, ಮಣ್ಣು ವಿಜ್ಞಾನಿ ಡಾ.ಎಸ್.ರವಿ, ಗೃಹ ವಿಜ್ಞಾನಿ ಡಾ.ಎಚ್.ಶಿಲ್ಪಾ, ಜಿಂದಾಲ್ನ ಮುಖ್ಯಸ್ಥರಾದ ಪೆದ್ದಣ್ಣಬಿಡಾಲ, ಕೃಷಿ ವಿಭಾಗದ ಸಂಯೋಜಕ ನಾಗನಗೌಡ ಇದ್ದರು.