ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಡಿಯುವ ನೀರಿನ ಯೋಜನೆಗೆ ಚಾಲನೆ

ಹರಗಿನಡೋಣಿ ಗ್ರಾಮಸ್ಥರ ದಶಕಗಳ ಬೇಡಿಕೆ ಈಡೇರಿದೆ: ಸಚಿವ ಬಿ.ನಾಗೇಂದ್ರ
Published 24 ಫೆಬ್ರುವರಿ 2024, 4:26 IST
Last Updated 24 ಫೆಬ್ರುವರಿ 2024, 4:26 IST
ಅಕ್ಷರ ಗಾತ್ರ

ಬಳ್ಳಾರಿ: ಹರಗಿನಡೋಣಿ ಗ್ರಾಮದಲ್ಲಿ ಶಾಸಕರ ನಿಧಿಯಿಂದ ₹30 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕುಡಿಯುವ ನೀರಿನ ಯೋಜನೆಗೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ, ಯುವ ಸಬಲೀಕರಣ, ಕ್ರೀಡಾ ಸಚಿವ ಹಾಗೂ ಜಿಲ್ಲಾ ಉಸ್ತುವರಿ ಸಚಿವ ಬಿ.ನಾಗೇಂದ್ರ ಅವರು ಭಾನುವಾರ ಚಾಲನೆ ನೀಡಿದರು.

ಹಲವು ದಶಕಗಳ ಬೇಡಿಕೆಯಾಗಿದ್ದ ಈ ಯೋಜನೆಗೆ ಚಾಲನೆ ದೊರೆತಿರುವುದರಿಂದ ಗ್ರಾಮಸ್ಥರು ಸಂಭ್ರಮಿಸಿದರು. ಪೈಪ್‍ಲೈನ್ ಮೂಲಕ ಗ್ರಾಮಕ್ಕೆ ಬಂದ ನೀರಿನಲ್ಲಿ ಚಿಣ್ಣರು ಮಿಂದೆದ್ದರು.

ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಸಚಿವ ಬಿ.ನಾಗೇಂದ್ರ, ಶಾಸಕರ ಅನುದಾನದಡಿ ಹರಗಿನ ಡೋಣಿ ಗಾಮಕ್ಕೆ ಅಲ್ಲಿಪುರ ಕೆರೆಯಿಂದ ಸುಮಾರು ಒಂಬತ್ತು ಕಿ.ಮೀ ಉದ್ದದ ಪೈಪ್‌ಲೈನ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗಿದೆ. ಹಲವು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಚಾಲನೆ ನೀಡಿರುವುದು ಸಂತಸ ತಂದಿದೆ ಎಂದರು.

ಗ್ರಾಮಕ್ಕೆ ಅತ್ಯಗತ್ಯವಾಗಿದ್ದ ಈ ಯೋಜನೆಯ ಈಡೇರಿಕೆಗೆ ಆಗ್ರಹಿಸಿ ಹರಗಿನಡೋಣಿ ಗ್ರಾಮಸ್ಥರು ಹಲವು ಬಾರಿ ಚುನಾವಣೆಗಳನ್ನು ಬಹಿಷ್ಕರಿಸುವ ಮೂಲಕ ಪ್ರತಿಭಟನೆ ನಡೆಸಿದ್ದನ್ನು ಸ್ಮರಿಸಿದ ಸಚಿವರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆ ಸಂದರ್ಭದಲ್ಲಿ ಗ್ರಾಮಸ್ಥರ ಬೇಡಿಕೆಯನ್ನು ಈಡೇರಿಸುವ ಕುರಿತು ಭರವಸೆ ನೀಡಿದ್ದರು. ಅದರಂತೆ ಈಗ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಹಿಂದೆ ಯೋಜನೆ ಸಿದ್ದಪಡಿಸಿದಂತೆ ಸುಮಾರು ₹25ಕೋಟಿ ವೆಚ್ಚದಲ್ಲಿ ಗ್ರಾಮಕ್ಕೆ ಹೊಂದಿಕೊಂಡಂತೆ ಕುಡಿಯುವ ನೀರಿನ ಕೆರೆ ನಿರ್ಮಾಣ ಮಾಡುವ ಮೂಲಕ ದಶಕಗಳಿಂದ ಹರಗಿನಡೋಣಿ ಗ್ರಾಮ ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಮುಂಬರುವ ವರ್ಷದೊಳಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮರಿಲಿಂಗಮ್ಮ, ಗ್ರಾಮ ಪಂಚಾಯತಿ ಸದಸ್ಯರಾದ ಗಂಗಾಧರ, ಸಿ.ಚಂದ್ರಪ್ಪ, ಬೊಗ್ಗೇಶ್, ಜಂಬಯ್ಯ, ಓಬಾರೆಡ್ಡಿ, ವೆಂಕಾರೆಡ್ಡಿ, ಬಿ.ಬಸವನಗೌಡ, ಗಂಗಣ್ಣ, ಮಲ್ಲಿಕಾರ್ಜುನ, ಶಂಕ್ರಪ್ಪ, ಹೊನ್ನೂರಪ್ಪ, ಬಾರಿಕರ ಜಗದೀಶ್, ಜಡಿಯಪ್ಪ ಹಾಗೂ ಮುಖಂಡರಾದ ಎಸ್.ಮಹಾರುದ್ರಗೌಡ, ಎಸ್.ಗವಿಸಿದ್ದನಗೌಡ, ಆರ್.ಶಿವರಾಂ ರೆಡ್ಡಿ, ದೊಡ್ಡ ಬಸಪ್ಪ ಮತ್ತು ಕೊಳಗಲ್ ಗ್ರಾಮ ಪಂಚಾಯಿತಿ ಉಸ್ತುವಾರಿ ವೆಂಕಟರಾವ್(ನಾನಿ) ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT