ಬಳ್ಳಾರಿ: ರಾಜ್ಯೋತ್ಸವದ ಸಲುವಾಗಿ ಕನ್ನಡ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಕನ್ನಡ ಸಂಸ್ಕೃತಿ ಇಲಾಖೆಯು ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ಗ್ರೀನ್ರೂಂನಲ್ಲಿ ಶುಕ್ರವಾರದಿಂದ ಪರ್ಯಾಯ ವ್ಯವಸ್ಥೆ ಮಾಡಿದೆ.
ರಂಗಮಂದಿರದ ಆವರಣದಲ್ಲಿರುವ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ದುರಸ್ತಿ ನಡೆಯುತ್ತಿರುವುದರಿಂದ ಪುಸ್ತಕ ಮಾರಾಟ ಸ್ಥಗಿತಗೊಂಡಿದೆ. ಪುಸ್ತಕಗಳನ್ನು ಗ್ರೀನ್ರೂಂಗೆ ಸ್ಥಳಾಂತರಿಸಿದ್ದರೂ ಪರ್ಯಾಯ ವ್ಯವಸ್ಥೆಯಾಗಿಲ್ಲ ಎಂದು ‘ಗುರುವಾರ’ ‘ಪ್ರಜಾವಾಣಿ’ಯಲ್ಲಿ ‘ದುರಸ್ತಿ ಕಾರ್ಯ: ಪುಸ್ತಕ ಮಾರಾಟ ಸ್ಥಗಿತ’ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಗೊಂಡಿತ್ತು.
ವರದಿ ಪ್ರಕಟಗೊಂಡ ಬೆನ್ನಿಗೇ ಜಿಲ್ಲೆಯ ಓದುಗರು ಅಸಮಾಧಾನವನ್ನೂ ವ್ಯಕ್ತಪಡಿಸಿದ್ದರು. ನಂತರ ಸ್ಥಳಕ್ಕೆ ಭೇಟಿ ನೀಡಿದ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣನವರ್, ಗ್ರೀನ್ ರೂಂನಲ್ಲೇ ಪುಸ್ತಕ ಮಾರಾಟ ಪ್ರಕ್ರಿಯೆ ಆರಂಭಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಿದರು.
ಕನ್ನಡ ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಕುವೆಂಪು ಭಾಷಾ ಭಾರತಿ ಸಂಸ್ಥೆಯ ಪ್ರಕಟಣೆಗಳು ಮಾರಾಟಕ್ಕೆ ಲಭ್ಯವಿದ್ದು ಓದುಗರು ಭೇಟಿ ನೀಡಬಹುದು.