ಸಂಡೂರು: ವಿಧಾನ ಪರಿಷತ್ ಸದಸ್ಯ ವೈ.ಸತೀಶ್ ರೆಡ್ಡಿ ನೇತೃತ್ವದಲ್ಲಿ ಸಂಡೂರು ವಿಧಾನ ಸಭಾ ಕ್ಷೇತ್ರದ ಕೆ.ಆರ್.ಪಿ.ಪಿ ಪಕ್ಷದ ಪರಾಜಿತ ಅಭ್ಯರ್ಥಿ ತಮ್ಮ ಬೆಂಬಲಿಗರೊಂದಿಗೆ ಗುರುವಾರ ಪಟ್ಟಣದ ದೌಲತ್ ಪುರ ರಸ್ತೆಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
ಈ ಕುರಿತು ಪ್ರತಿಕ್ರಿಯಿಸಿದ ಕೆ.ಎಸ್.ದಿವಾಕರ್ ಅವರು ‘ಇದು ನಮ್ಮ ಮಾತೃ ಪಕ್ಷ ಮತ್ತೆ ಪಕ್ಷ ಸೇರ್ಪಡೆಯಾಗಿರುವುದು ಸಂತಸ ತಂದಿದೆ. ಸಂಡೂರು ತಾಲ್ಲೂಕಿನ ಎಲ್ಲಾ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಮೋದಿ ಪ್ರಧಾನಿಯಾಗಿಸಲು ಹಾಗೂ ಶ್ರೀರಾಮುಲು ಅವರನ್ನು ಸಂಸದರನ್ನಾಗಿಸಲು ಬಳ್ಳಾರಿ ಜಿಲ್ಲೆಯಲ್ಲೇ ಸಂಡೂರು ಕ್ಷೇತ್ರದಿಂದ ಹೆಚ್ಚಿನ ಲೀಡ್ ಆಗುವಂತೆ ಶ್ರಮಿಸುತ್ತೇನೆ’ ಎಂದರು.
ವಿಧಾನ ಪರಿಷತ್ ಸದಸ್ಯ ಸತೀಶ್ ಮಾತನಾಡಿ, ‘ಜಿಲ್ಲೆಗೆ ಇನ್ನಷ್ಟು ಕೈಗಾರಿಕೆಗಳು ಬೇಕು, ಜನರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಬೇಕು ಎಂಬ ಉದ್ದೇಶದೊಂದಿಗೆ ಈ ಬಾರಿಯ ಚುನಾವಣೆಯಲ್ಲಿ ರಾಮುಲು ಅವರನ್ನು ಗೆಲ್ಲಿಸಲು ಪ್ರಯತ್ನ ಸಾಗಿದೆ. ಕಾಂಗ್ರೆಸ್ ಪಕ್ಷ ಸಂಸತ್ ಚುನಾವಣೆಯಲ್ಲಿ ಜಯಗಳಿಸಿದರೆ ಕುಟುಂಬಕ್ಕೊಂದು ಲಕ್ಷ ನೀಡುವ ಭರವಸೆ ನೀಡುತ್ತಿದ್ದಾರೆ. ಹೀಗಾದರೆ ದೇಶವೇ ದಿವಾಳಿ ಆಗಲಿದೆ‘ ಎಂದರು.
ಪಕ್ಷದ ಬಳ್ಳಾರಿ ಜಿಲ್ಲಾ ಉಪಾಧ್ಯಕ್ಷ ಜಿ.ಟಿ ಪಂಪಾಪತಿ ಮಾತನಾಡಿ, ಬಳ್ಳಾರಿ ಜಿಲ್ಲೆಯು ಮುದ್ರಾ ಯೋಜನೆಯ ಸದ್ಬಳಕೆಯಲ್ಲಿ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ಇದು ಮೋದಿಯವರ ಉದ್ಯೋಗ ಗ್ಯಾರಂಟಿಯಾಗಿದೆ’ ಎಂದರು.
ಬಿಜೆಪಿ ಸಂಡೂರು ಮಂಡಲ ಅಧ್ಯಕ್ಷ ನಾನ ಸಾಹೇಬ್ ನಿಕ್ಕಂ, ಮುಖಂಡರಾದ ವಿಠಲಾಪುರ ತಿರುಮಲ, ಅಂತಾಪುರ ಶಂಕರ್ ರಾಮಘಢ ರಘು, ದರೋಜಿ ರಮೇಶ್ , ಅಚ್ಯುತ್, ನಾಗರಾಜ್ ,ಬಂಡ್ರಿ ಗುರು,ಸೇರಿದಂತೆ ದಿವಾಕರ್ ಅವರ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.