ಹಗರಿಬೊಮ್ಮನಹಳ್ಳಿ: ತಾಯಿ ಪ್ರೀತಿ ಮತ್ತು ಮಮತೆಗೆ ಬೆಲೆ ಕಟ್ಟಲಾಗದು, ತಾಯಿಯ ಸಂಕಷ್ಟಗಳನ್ನು ದೂರ ಮಾಡುವ ಹಾಗೆ ಮಕ್ಕಳು ಸಾಧನೆ ಮಾಡಬೇಕು ಎಂದು ಅಬ್ದುಲ್ ಗಫರ್ ಖಾನ್ ಹೇಳಿದರು.
ತಾಲ್ಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಮಾತಾ ಸೇವಾ ಟ್ರಸ್ಟ್ನಿಂದ ಗುರುವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯುವಕರು ದುರಭ್ಯಾಸಗಳಿಗೆ ದಾಸರಾಗಬಾರದು. ಓದಿನಲ್ಲಿ ಆಸಕ್ತಿ ಬೆಳೆಸಿಕೊಂಡು ವಿವಿಧ ರಂಗಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಬೇಕು ಎಂದು ಸಲಹೆ ನೀಡಿದರು.
ಟ್ರಸ್ಟ್ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯ ಎಂದರು.
ಟ್ರಸ್ಟ್ ಅಧ್ಯಕ್ಷ ಜಿ.ಶ್ರೀನಿವಾಸ ಶೆಟ್ಟಿ ಮಾತನಾಡಿ, ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ, ಬದುಕಿನಲ್ಲಿ ಆದರ್ಶಗೂಡಿಸಿಕೊಳ್ಳಬೇಕು. ದುಡಿಮೆಯ ಒಂದು ಪಾಲು ಧರ್ಮಕ್ಕೆ ಇರಲಿ, ಶ್ರಮದ ಒಂದಂಶ ಸಮಾಜಕ್ಕಿರಲಿ ಎಂದರು.
ಇದೇ ಸಂದರ್ಭದಲ್ಲಿ ಬುದ್ಧಿಮಾಂದ್ಯ ಮಕ್ಕಳನ್ನು ಸಾಕಿ ಸಲುಹುತ್ತಿರುವ, ಸೂಲಗಿತ್ತಿಯರಾದ ಕಾರಪುಡಿ ಹುಲಿಗೆಮ್ಮ, ಕಾಡಪ್ಪನವರ ಹುಲಿಗೆಮ್ಮ, ಉಪ್ಪಾರ ಇಟಿಗಿ ಹುಲಿಗೆಮ್ಮ, ಮಾದೂರು ಹನುಮಕ್ಕ ಮತ್ತು ನೈಜೀರಿಯದಲ್ಲಿರುವ ಗ್ರಾಮದ ಕಟ್ಟೆ ಬಸವರಾಜ್, ಸಮಾಜ ಸೇವಕ ಎಸ್.ಚಮಲಪ್ಪ ಇವರನ್ನು ಸನ್ಮಾನಿಸಲಾಯಿತು.
ಜಿ.ಸತ್ಯನಾರಾಯಣ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸುರೇಖಾ ಮತ್ತು ಸೋಮನಾಥ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಈ.ಸವಿತಾ, ಜಿ.ಸರಸ್ವತಿ, ಗ್ರಾಮ ಪಂಚಾಯ್ತಿ ಸದಸ್ಯ ಟಿ.ಮಂಜುನಾಥ, ಹಡಗಲಿ ಖಾಜಾ ಸಾಹೇಬ್, ಎ.ಜಿ.ಮೋಹನ್ ಪಾಟೀಲ್, ವಿ.ಹನುಮಂತ, ಸೋಮನಾಥ, ಕಿಟಕಿ ಶಿವಣ್ಣ, ಒ.ಬಸವರಾಜ, ಅಂಬಳಿ ಕೇಶವಮೂರ್ತಿ, ಬಾರಿಕರ ಹುಲುಗಪ್ಪ ಇದ್ದರು.