ದೇವನಹಳ್ಳಿ: ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ 1,777 ಎಕರೆ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ಭೂ ಸ್ವಾಧೀನ ವಿರೋಧಿಸಿ ನಡೆಯುತ್ತಿರುವ 750ನೇ ದಿನದ ಧರಣಿ ಸಭೆಯಲ್ಲಿ ಚುನಾವಣಾ ಬಹಿಷ್ಕಾರವನ್ನು ಹಿಂಪಡೆಯಲಾಗಿದೆ.
ಎಲ್ಲ ರಾಜಕೀಯ ಪಕ್ಷಗಳು ರೈತ ವಿರೋಧಿ ಧೋರಣೆ ಖಂಡಿಸಿ, ಏ.13ರಂದು ನಡೆದ ಪ್ರತಿರೋಧ ಸಮಾವೇಶದಲ್ಲಿ ರೈತರು ಚುನಾವನಾ ಬಹಿಷ್ಕಾರ ಹಾಗೂ ಮತ ಪ್ರಚಾರಕ್ಕೆ ಪ್ರತಿರೋಧ ಮಾಡುವ ತೀರ್ಮಾನ ಕೈಗೊಂಡಿದ್ದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ಪ್ರಚಾರಕ್ಕೆ ಬಂದಾಗ ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದ ರೈತರು, ಕಳೆದ 3 ದಿನಗಳಿಂದ 13 ಹಳ್ಳಿಗಳಲ್ಲಿಯೂ ಮತದಾನ ಬಹಿಷ್ಕಾರದ ಬ್ಯಾನರ್ಗಳನ್ನು ಅಳವಿಡಿಸಿ ಹೋರಾಟ ತೀವ್ರಗೊಳ್ಳಿಸಿದ್ದರು.
ಸೋಮವಾರ ಧರಣಿ ಸ್ಥಳಕ್ಕೆ ಜಿಲ್ಲಾಧಿಕಾರಿ ಎನ್. ಶಿವಶಂಕರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಕಾರ್ಜುನ ಬಾಲದಂಡಿ, ಜಿ.ಪಂ ಸಿಇಓ ಕೆ.ಎನ್.ಅನುರಾಧ, ತಹಶೀಲ್ದಾರ್ ಶಿವರಾಜ್ ನೇತೃತ್ವದ ಅಧಿಕಾರಿಗಳ ತಂಡ ಮನವೊಲಿಸಲು ಪ್ರಯತ್ನಿಸಿತ್ತು.
ಚುನಾವಣೆ ಬಳಿಕ ಸರ್ಕಾರದೊಂದಿಗೆ ಮಾತನಾಡಿ ಸಂಬಂಧಪಟ್ಟ ಸಚಿವರು, ಅಧಿಕಾರಿಗಳು, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರೈತರೊಂದಿಗೆ ಸಭೆ ಆಯೋಜಿಸುವ ಭರವಸೆ ನೀಡಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ‘ಚುನಾವಣೆ ನಂತರ ಸರ್ಕಾರದೊಂದಿಗೆ ಮಾತನಾಡಿ, ರೈತರಿಂಗೆ ಯಾವುದೇ ರೀತಿಯ ಅನ್ಯಾಯ ಆಗದಂತೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುವ ಭರವಸೆ ನೀಡಿ ತೆರಳಿದ್ದರು.
ಎಲ್ಲ ಸಂದಾನ ಸಭೆಗಳಲ್ಲಿ ರೈತರನ್ನು ಬಿಟ್ಟು ಭೂ ಸ್ವಾಧೀನ ವಿಚಾರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಆಶ್ವಾಸನೆ ದೊರೆತ ನಂತರ ಏ.26ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತ ಬಹಿಷ್ಕಾರ ಹಿಂಪಡೆದು ರೈತರು ಮತ ಚಲಾಯಿಸುವ ನಿರ್ಧಾರಕ್ಕೆ ಬಂದಿದ್ದಾರೆ.