ಹೊಸಕೋಟೆ: ಸಮಾಜ ಸುಧಾರಣೆಗಾಗಿ ತಮ್ಮ ಜೀವನವನ್ನೇ ಮಡಿಪಾಗಿಟ್ಟು ಶ್ರಮಿಸಿದ ಸಮಾಜ ಸುಧಾರಕರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸಬಾರದು ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ತಾಲ್ಲೂಕಿನ ಜಡಿಗೇನಹಳ್ಳಿ ಹೋಬಳಿಯ ಅತ್ತಿವಟ್ಟ ಗ್ರಾಮದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಕನಕ ಜಯಂತಿಯಲ್ಲಿ ಮಾತನಾಡಿದರು.
16ನೇ ಶತಮಾನದಲ್ಲೇ ಕನಕದಾಸರು ಜಾತಿ ವಿರುದ್ಧ ಹೋರಾಡುವ ಮೂಲಕ ಸಮಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ್ದರು. ಇದಕ್ಕಾಗಿ ಮಾಧ್ಯಮವಾಗಿ ಕೀರ್ತನೆಗಳನ್ನು ಬಳಸಿಕೊಂಡಿದ್ದರು. ಅವರ ಕೀರ್ತನೆಗಳ ಶಕ್ತಿ ಇಂದಿಗೂ ಸಮಾಜದಲ್ಲಿ ಕೆಲಸ ಮಾಡುತ್ತಿವೆ ಎಂದು ಹೇಳಿದರು.
ಅವರ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳೂವ ಮೂಲಕ ಇಂದಿಗೂ ಸಮಾಜದಲ್ಲಿ ಜೀವಂತವಾಗಿರುವ ಮೇಲು–ಕೀಳು, ಭೇದಭಾವವನ್ನು ದೂರ ಮಾಡಬೇಕು ಎಂದು ಹೇಳಿದರು.
ಹಾಲುಮತ ಮಹಾಸಭಾ ತಾಲೂಕು ಅಧ್ಯಕ್ಷ ಅಪಸಂದ್ರ ನಾರಾಯಣಸ್ವಾಮಿ ಮಾತನಾಡಿದರು.
ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಎಲ್ಅಂಡ್ಟಿ ಮಂಜುನಾಥ್, ಮುನಿರಾಜು, ಪೊಲೀಸ್ ಮುನಿಯಪ್ಪ, ಸುಬ್ಬರಾಜು, ಮಲ್ಲಸಂದ್ರ ಶೇಷಪ್ಪ, ತವಟಹಳ್ಳಿ ಭತ್ಯಪ್ಪ, ಹುಲ್ಲೂರು ರಾಜ್ಗೋಪಾಲ್ ಹಾಜರಿದ್ದರು.