ಆನೇಕಲ್ : ತಾಲ್ಲೂಕಿನ ಮಾಯಸಂದ್ರದ ಧರ್ಮರಾಯಸ್ವಾಮಿ ದ್ರೌಪದಮ್ಮನವರ ಕರಗ ಮಹೋತ್ಸವ ಭಾನುವಾರ ರಾತ್ರಿ ವೈಭವದಿಂದ ನಡೆಯಿತು. ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಭಕ್ತರು ವೈಭವದ ಕರಗ ಮಹೋತ್ಸವಕ್ಕೆ ಸಾಕ್ಷಿಯಾದರು.
ಭಾನುವಾರ ಮಧ್ಯರಾತ್ರಿ 3ರ ಸುಮಾರಿಗೆ ಕರಗ ಹೊತ್ತ ಗುರುಮೂರ್ತಿ ಅವರು ಮಾಯಸಂದ್ರ ಧರ್ಮರಾಯಸ್ವಾಮಿ ದೇವಾಲಯದಿಂದ ಹೊರ ಬಂದರು. ವೀರಕುಮಾರರು ಢಿಕ್ ಡೀ, ಗೋವಿಂದ... ಗೋವಿಂದ... ಎಂದು ಜಯಘೋಷ ಮಾಡುತ್ತಾ ಕರಗ ಬರಮಾಡಿಕೊಂಡರು. ಮೊಣಕಾಲಿನಲ್ಲಿ ದೇವಾಲಯದಿಂದ ಕರಗ ಹೊರ ಬರುತ್ತಿದ್ದಂತೆ ಭಕ್ತರು ಜಯಘೋಷ ಮೂಲಕ ಕರಗವನ್ನು ಸ್ವಾಗತಿಸಿದರು. ದೇವಾಲಯದ ಪ್ರಾಂಗಣವನ್ನು ಪ್ರದಕ್ಷಿಣೆ ಮಾಡಿ ಕರಗವು ಹೊರ ಬಂದಿತು.
ದೇವಾಲಯದ ಮುಂಭಾಗದಲ್ಲಿ ಹಾಕಲಾಗಿದ್ದ ಅಗ್ನಿಕೊಂಡವನ್ನು ಕರಗವು ಪ್ರವೇಶಿಸಿತು. ನಾದಸ್ವರ, ಡೋಲು, ತಮಟೆಯ ವಾದನಕ್ಕೆ ತಕ್ಕಂತೆ ಕರಗವು ಹೆಜ್ಜೆ ಹಾಕಿ ಮುಂದೆ ಮುಂದೆ ಸಾಗಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಕರಗ ಸಾಗಿತು. ಮನೆ ಮನೆಗಳಲ್ಲಿ ಕರಗಕ್ಕೆ ಮಡಿಲು ತುಂಬಿ ದೇವಿಯನ್ನು ಬರಮಾಡಿಕೊಂಡರು.
ಮಲ್ಲಿಗೆ ಹೂವುಗಳನ್ನು ಕರಗಕ್ಕೆ ಅರ್ಪಿಸುವ ಮೂಲಕ ಜನರು ಭಕ್ತಿ,ಭಾವ ಮೆರೆದರು. ಮನೆ ಮನೆಗಳ ಮುಂದೆ ಕರಗವು ಬರುತ್ತಿದ್ದಂತೆ ಭಕ್ತಿಯಿಂದ ಪೂಜೆ ಸಲ್ಲಿಸಿದರು. ಮಾಯಸಂದ್ರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕರಗ ಸಂಚರಿಸಿತು.
ಪಿಳ್ಳಪ್ಪ ಸ್ವಾಮಿ ಆಶ್ರಮದ ಬಳಿ ಕರಗವು ವೈಭವದ ನೃತ್ಯ ಪ್ರದರ್ಶನ ನೀಡಿತು. ಸಹಸ್ರಾರು ಮಂದಿ ಭಕ್ತರು ವೈಭವದ ಉತ್ಸವವನ್ನು ಭಕ್ತರು ಕಣ್ತುಂಬಿಕೊಂಡರು. ಗ್ರಾಮ ದೇವತೆಗಳ 25ಕ್ಕೂ ಹೆಚ್ಚು ಪಲ್ಲಕ್ಕಿಗಳ ಉತ್ಸವ ಆಯೋಜಿಸಲಾಗಿತ್ತು. ಸೋಮವಾರ ಮುಂಜಾನೆ 6ರ ವೇಳೆಗೆ ಕರಗ ದೇವಾಲಯಕ್ಕೆ ಮರಳಿತು.
ಕರಗ ಮಹೋತ್ಸವದ ಅಂಗವಾಗಿ ದ್ರೌಪದಿ ದೇವಿ ಕಲ್ಯಾಣೋತ್ಸವ ಆಯೋಜಿಸಲಾಗಿತ್ತು. ವೀರ ವಸಂತರಾಯ(ಬಲಿರಾಮ) ಪ್ರತಿಷ್ಠಾಪನೆಯಾಗಿದ್ದು ಮಂಗಳವಾರ ಸಂಜೆ ಕೋಟೆ ಜಗಳ ನಡೆಯಲಿದೆ. ಕೋಟೆ ಜಗಳಲ್ಲಿ ವೀರವಸಂತರಾಯನ ಶಿರಚ್ಛೇದನ ನಡೆಯಲಿದೆ. ಕರಗ ಮಹೋತ್ಸವದ ಅಂಗವಾಗಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು ವಿಶೇಷ ಪೂಜೆ, ಧಾರ್ಮಿಕ ಆಚರಣೆಗಳು ನಡೆದಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.