ದೇವನಹಳ್ಳಿ: ಪ್ರಜೆಗಳಿಗೆ ನ್ಯಾಯ ಕೊಡಿಸಲು ಸಹೋದರತ್ವದಲ್ಲಿ ಕೆಲಸ ಮಾಡಬೇಕಿರುವ ಪೊಲೀಸರು, ಹೊಸಕೋಟೆಯಲ್ಲಿ ವಕೀಲರ ಮೇಲೆ ದಬ್ಬಾಳಿಕೆ ಮಾಡಿರುವುದು, ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದನ್ನು ಖಂಡಿಸಿ ದೇವನಹಳ್ಳಿ ವಕೀಲ ಸಂಘದ ಪದಾಧಿಕಾರಿಗಳು ಗುರುವಾರ ನ್ಯಾಯಾಲಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಉಪಾಧ್ಯಕ್ಷ ಆರ್.ಕೇಶವಮೂರ್ತಿ ಮಾತನಾಡಿ, ‘ಪೊಲೀಸರು ಜನಸ್ನೇಹಿಯಾಗಿ ಕೆಲಸ ಮಾಡುವುದನ್ನು ಬಿಟ್ಟು ಗೂಂಡಗಳಂತೆ ಸಾರ್ವಜನಿಕ ಪ್ರದೇಶದಲ್ಲಿ ವರ್ತಿಸುವುದು ಅಕ್ಷಮ್ಯವಾಗಿದ್ದು, ಶಿಸ್ತಿನ ಇಲಾಖೆಯಲ್ಲಿ ಅವರಿಗೆ ಕಲಿಸಿದ್ದು ಇದೆಯೇ ಎಂಬಂತಹ ಪ್ರಶ್ನೆ ಮೂಡುತ್ತದೆ’ ಎಂದು ಪ್ರಶ್ನಿಸಿದರು.
‘ಹೊಸಕೋಟೆಯ ಅನುಗೊಂಡನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗುಂಡೂರಿನಲ್ಲಿ ಜಮೀನಿನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದಾವೆ ಇದೆ ಎಂದು ಮನವರಿಕೆ ಮಾಡಿಕೊಡುತ್ತಿದ್ದ ವಕೀಲರನ್ನೇ ನೂಕಾಡಿ, ಕೊರಳಪಟ್ಟಿ ಹಿಡಿದ ಪೊಲೀಸ್ ಇನ್ಸ್ಪೆಕ್ಟರ್ ಚನ್ನೇಶ್ ಅಮಾನತು ಆಗಬೇಕು’ ಎಂದು ಒತ್ತಾಯಿಸಿದರು.
‘ನೆಲದ ಕಾನೂನಿನ ಅಡಿಯಲ್ಲಿ ಕೆಲಸ ಮಾಡುವುದನ್ನು ಪೊಲೀಸರು ಕಲಿಯಬೇಕಿದೆ. ಸಿವಿಲ್ ವ್ಯಾಜ್ಯಗಳಲ್ಲಿ ಮಧ್ಯಸ್ಥಿಕೆ ವಹಿಸಿ, ಶಾಂತಿಭಂಗಕ್ಕೆ ಪೊಲೀಸರೇ ಪ್ರಚೋದನೆ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ’ ಎಂದು ದೇವನಹಳ್ಳಿ ವಕೀಲ ಸಂಘ ಬೇಸರಿಸಿದೆ.
ನಾಗೇಶ್, ಡಿ.ಎಂ.ಮುನಿಯಪ್ಪ, ದಿನೇಶ್, ವೈ.ಎನ್.ಮಂಜುನಾಥ್, ಹೆಗ್ಗನಹಳ್ಳಿ ನವೀನ್ ಕುಮಾರ್ ಸೇರಿದಂತೆ ಪದಾಧಿಕಾರಿಗಳು ಇದ್ದರು.