ಗೋಕಾಕ: ‘ಮಾನವೀಯ ಮೌಲ್ಯ ಮತ್ತು ಮನುಷ್ಯ ಸಂಬಂಧಗಳನ್ನು ಬೆಸೆಯುವ ಶರಣರ ವಚನಗಳು ಇಂದಿಗೂ ಪ್ರಸ್ತುತವಾಗಿವೆ. ಬಸವ ತತ್ವದ ಸಿದ್ಧಾಂತವೇ ಮನುಷ್ಯ ಪ್ರೀತಿಯಾಗಿದ್ದು, ಶಾಂತಿ, ನೆಮ್ಮದಿಯ ಪರಿಹಾರಕ್ಕೆ ಬಸವಣ್ಣವರ ವಚನಗಳೇ ಬಹು ದೊಡ್ಡ ಪರಿಹಾರವಾಗಿವೆ’ ಎಂದು ಕವಿ ಈಶ್ವರ ಮಮದಾಪೂರ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಬಸವ ಜಯಂತಿ ಅಂಗವಾಗಿ ಗುಂಪು ಕಲಾವಿದರ ಬಳಗದಿಂದ ಹಮ್ಮಿಕೊಂಡಿದ್ದ ಬಸವಣ್ಣನವರ ವಚನ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಅಸಮಾನತೆ ತೊಲಗಿದ್ದು, ಎಲ್ಲೆಡೆ ಸಮಾನತೆ ಬೆಳೆಸಬೇಕಿದೆ. ಬಸವಣ್ಣನವರ ಮೂಲ ಉದ್ಧೇಶ ಅರಿತುಕೊಂಡು ಜೀವನ ಸಾಗಿಸಬೇಕಿದೆ’ ಎಂದರು.
ಪ್ರಾಚಾರ್ಯ ಶಶಿಧರ ಬಡಿಗೇರ ಮಾತನಾಡಿ, ‘ಬಸವಣ್ಣನವರ ವಚನಗಳು ಅತ್ಯಮೂಲ್ಯ. ನಾವೆಲ್ಲರೂ ಕೇವಲ ಓದಿ ತಿಳಿದರೆ ಸಾಲದು. ಅದರಲ್ಲಿನ ಅಂಶಗಳನ್ನು ಅನುಷ್ಠಾನಕ್ಕೂ ತಂದು ವಿದ್ಯಾರ್ಥಿಗಳಿಗೆ ಮನ ಮುಟ್ಟಿಸಬೇಕು’ ಎಂದು ತಿಳಿಸಿದರು.
ಕಲಾವಿದ ಜಿ.ಕೆ.ಕಾಡೇಶಕುಮಾರ ಮಾತನಾಡಿ, ‘ಗುಂಪು ಕಲಾವಿದರ ವೇದಿಕೆಯು ಹೊಸ ಕಲಾವಿದರಿಗೆ ಸೂಕ್ತ ಅವಕಾಶ ಕಲ್ಪಿಸಿಕೊಟ್ಟಿದೆ. ವಾದ್ಯ ಸಂಗೀತದ ಕಲಿಕೆ ಬಯಸುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುವುದು’ ಎಂದರು.
ಕಲಾವಿದರಾದ ಕಾಡೇಶಕುಮಾರ, ಶಾರದಾ ಬಡಿಗೇರ, ಗಂಗಾ ಹೇಮಂತ, ಜಯಶ್ರೀ ದಲಾಲ, ವಿಜಯಲಕ್ಷ್ಮಿ ಪಂಚಗಾವಿ ಅವರು ಬಸವಣ್ಣನವರ ವಚನಗಳನ್ನು ಪ್ರಸ್ತುತಪಡಿಸಿದರು. ಬಸವರಾಜ ಮಠಪತಿ, ಸೌಭಾಗ್ಯ ಮಗುದಮ್, ಶ್ರೀದೇವಿ ಕಡೇವಾಡಿ, ಕವಿತಾ ಕುರಬೇಟ ಇದ್ದರು.