ಚಿಕ್ಕೋಡಿ: ‘ಬರುವ ಹಂಗಾಮಿನಲ್ಲಿ ಕಾರ್ಖಾನೆಯ ಕಾರ್ಮಿಕರು ಜವಾಬ್ದಾರಿ ಅರಿತು ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರಮಾಣದ ಕಬ್ಬು ನುರಿಸಿ ಹೆಚ್ಚು ಸಕ್ಕರೆ ಉತ್ಪಾದನೆ ಮಾಡಬೇಕು. ಈ ಮೂಲಕ ಕಾರ್ಖಾನೆಯ ಆಡಳಿತ ಮಂಡಳಿ ಹೊಂದಿರುವ ಕಬ್ಬು ನುರಿಸುವ ಗುರಿಯನ್ನು ಮುಟ್ಟಲು ಪ್ರಯತ್ನಿಸಬೇಕು’ ಎಂದು ಸಿ.ಬಿ.ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಹೇಳಿದರು.
ಸ್ಥಳೀಯ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ 2024-25ನೇ ಹಂಗಾಮಿನ ಪೂರ್ವ ಸಿದ್ಧತಾ ಕೆಲಸಗಳ ಅಂಗವಾಗಿ ಕಾರ್ಖಾನೆಯ ರೋಲರ್ ಪೂಜೆ ನೆರವೇರಿಸಿ ಮಾತನಾಡಿ, ‘ಸಹಕಾರಿ ಸಕ್ಕರೆ ಕಾರ್ಖಾನೆಯು ಪ್ರಗತಿ ಹೊಂದಿದಲ್ಲಿ ರೈತರ ಅಭಿವೃದ್ಧಿಯಾಗುತ್ತದೆ. ರೈತರ ಅಭಿವೃದ್ಧಿಯಾದರೆ ದೇಶ ಆರ್ಥಿಕವಾಗಿ ಮೇಲೆ ಬರಲು ಸಾಧ್ಯವಾಗುತ್ತದೆ’ ಎಂದರು.
ಕಾರ್ಖಾನೆಯ ಉಪಾಧ್ಯಕ್ಷ ತಾತ್ಯಾಸಾಹೇಬ ಕಾಟೆ, ಸಂಚಾಲಕರಾದ ನಂದಕುಮಾರ ನಾಶಿಪುಡಿ, ಮಲ್ಲಪ್ಪ ಮೈಶಾಳೆ, ಭೀಮಗೌಡ ಪಾಟೀಲ, ಅಣ್ಣಾಸಾಬ ಇಂಗಳೆ, ವ್ಯವಸ್ಥಾಪಕ ನಿರ್ದೇಶಕ ಐ.ಎನ್.ಗೊಲಬಾವಿ ಸೇರಿದಂತೆ ಇತರರು ಇದ್ದರು.