ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ರಾಷ್ಟ್ರಸಂತ, ಆಚಾರ್ಯ ಗುಣಧರನಂದಿ ಮಹಾರಾಜ ಅವರ 33ನೇ ದೀಕ್ಷಾ ಜಯಂತಿ ಪ್ರಯುಕ್ತ, ತಾಲ್ಲೂಕಿನ ಶಮನೇವಾಡಿ ಗ್ರಾಮದಲ್ಲಿ ಬುಧವಾರ ‘ಮಂಗಲ ಮಹಾಕಲಶ’ದ ಭವ್ಯ ಮೆರವಣಿಗೆ ನೆರವೇರಿತು. ಜಿಲ್ಲೆ ಹಾಗೂ ನೆರೆಯ ಮಹಾರಾಷ್ಟ್ರದಿಂದ ಬಂದಿದ್ದ ಅಪಾರ ಸಂಖ್ಯೆಯ ಜನ ಇದಕ್ಕೆ ಸಾಕ್ಷಿಯಾದರು.
ಚಂದ್ರಪ್ರಭು ದಿಗಂಬರ ಜೈನ ಮಂದಿರದಿಂದ ಕಲಶ ಹೊತ್ತು ಹೊರಟ ಮಹಿಳೆಯರು ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಆನೆ, ಕುದುರೆ ಸಾರೋಟು, ವಿವಿಧ ವಾದ್ಯವೃಂದಗಳ ತಂಡಗಳೂ ಮೇಳೈಸಿದವು. ರಸ್ತೆಯ ಇಕ್ಕೆಲಗಳಲ್ಲಿ ಜನರು ನಿಂತು ನೋಡಿ ಸಂಭ್ರಮಿಸಿದರು.
ಇದಕ್ಕೂ ಮೊದಲು ಚಂದ್ರಪ್ರಭು ದಿಗಂಬರ ಜೈನ ಮಂದಿರದಲ್ಲಿ ಗುಣಧರನಂದಿ ಮಹಾರಾಜರ ಸಾನ್ನಿಧ್ಯದಲ್ಲಿ ಜಿನಾಭಿಷೇಕ ನಡೆಯಿತು. ಆರಿಕಾರತ್ನ 105 ಪ್ರಜ್ಞಮತಿ ಮಾತಾಜಿ ಸಾನ್ನಿಧ್ಯದಲ್ಲಿ ಮೃತ್ಯುಂಜಯ ವಿಧಾನ, ಪಂಚಾಮೃತ ಅಭಿಷೇಕ ನಡೆದವು. ನಂತರ ಗುಣಧರನಂದಿ ಮಹಾರಾಜರು ಧರ್ಮೋಪದೇಶ ನೀಡಿದರು.
₹80 ಲಕ್ಷ ವೆಚ್ಚದ ಸಾಧುನಿವಾಸ ಕಟ್ಟಡ ನಿರ್ಮಾಣಕ್ಕೆ ಚಂದ್ರಪ್ರಭು ದಿಗಂಬರ ಜೈನ ಕಮಿಟಿಯಿಂದ ಚಾಲನೆ ನೀಡಲಾಯಿತು. ಮುಖಂಡರಾದ ಕುಮಾರ ಕೋರುಚೆ, ಕುಮಾರ ಮಗದುಮ್, ಆರ್.ಬಿ. ಖೋತ, ಅಣ್ಣಸಾಹೇಬ ಖೋತ, ಬಾಬಾಸಾಹೇಬ ಐನಾಪೂರೆ, ಸುದರ್ಶನ ಖೋತ, ಜಿತೇಶ ಖೋತ, ದೀಪಕ ಖೋತ, ರಾಜಕುಮಾರ ಖೋತ, ಸಚಿನ ಖೋತ, ಸೋಮನಖೋತ, ಜೈಕುಮಾರ ಖೋತ ಮುಂತಾದವರು ಭಾಗವಹಿಸಿದ್ದರು.
ಸಂಜೆ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಬಾಬಾಸಾಹೇಬ ಹನಮನಾಳೆ ಪ್ರಸಾದ ವ್ಯವಸ್ಥೆ ಮಾಡಿದರು.