ಬೆಳಗಾವಿ: ‘ಕನ್ನಡದ ಬಗ್ಗೆ ಯುವಜನರಲ್ಲಿ ಅಸಡ್ಡೆ ಸಲ್ಲದು. ಮಾತೃ ಭಾಷೆಯನ್ನು ಗೌರವಿಸುವ ಕೆಲಸವನ್ನು ಎಲ್ಲರೂ ಮಾಡಬೇಕು’ ಎಂದು ಸಾಹಿತಿ ಪ್ರೊ.ಬಸವರಾಜ ಜಗಜಂಪಿ ಹೇಳಿದರು.
ಇಲ್ಲಿನ ಶಿವಬಸವನಗರದಲ್ಲಿರುವ ಅಖಿಲ ಭಾರತ ಎಂಜಿನಿಯರ್ಗಳ ಸಂಸ್ಥೆಯ ಸ್ಥಳೀಯ ಕೇಂದ್ರದಿಂದ ಈಚೆಗೆ ಆಯೋಜಿಸಿದ್ದ 66ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
‘ಕನ್ನಡ ಭಾಷೆ ಪುರಾತನ ಅಷ್ಟೇ ಅಲ್ಲ; ಅತ್ಯಂತ ಶ್ರೀಮಂತವಾದುದು. ಆ ಶ್ರೀಮಂತಿಕೆಯನ್ನು ನಾವು ಮುಂದುವರಿಸಿಕೊಂಡು ಹೋಗಬೇಕು. ಬಳಸುವ ಮೂಲಕ ಬೆಳೆಸುವ ಕಾರ್ಯದಲ್ಲಿ ನಾವೆಲ್ಲರೂ ಪಾಲುದಾರರಾಗಬೇಕು. ಇದರೊಂದಿಗೆ ನಮ್ಮ ಸಂಸ್ಕೃತಿಯನ್ನೂ ಉಳಿಸಿಕೊಳ್ಳಬೇಕು’ ಎಂದರು.
ಸಂಸ್ಥೆಯ ಅಧ್ಯಕ್ಷ ರಮೇಶ ಜಂಗಲ ಭುವನೇಶ್ವರಿ ಫೋಟೊಗೆ ಪೂಜೆ ಸಲ್ಲಿಸಿ, ಕನ್ನಡ ಧ್ವಜಾರೋಹಣ ನೆರವೇರಿಸಿದರು.
ಎಂಜಿನಿಯರ್ ಸಿ.ಎನ್. ವಾಲಿ ಮಾತನಾಡಿದರು. ಎಂಜಿನಿಯರ್ಗಳಾದ ವಿ.ಬಿ .ಜಾವೂರ, ಬಿ.ಡಿ. ಜಾಧವ, ಸಂಸ್ಥೆಯ ಕಾರ್ಯದರ್ಶಿ ಪ್ರೊ.ವೀರಣ್ಣ ಹಾಗೂ ಮಾನವ ಕಂಪ್ಯೂಟರ್ ಎಂದೇ ಖ್ಯಾತರಾದ ಬಸವರಾಜ ಉಮರಾಣಿ ಭಾಗವಹಿಸಿದ್ದರು.