ಬೆಳಗಾವಿ: ‘ನಾನು ಯಾರನ್ನೂ ತುಳಿಯುವ ಪ್ರಶ್ನೆಯೇ ಇಲ್ಲ. ಕುಡಚಿ ವಿಧಾನಸಭೆ ಕ್ಷೇತ್ರಕ್ಕೆ ಮಹೇಂದ್ರ ತಮ್ಮಣ್ಣವರ ಅವರಿಗೆ ನಾನೇ ಟಿಕೆಟ್ ಕೊಡಿಸಿದ್ದೇನೆ. ನಿರ್ನಾಮ ಮಾಡುವ ಉದ್ದೇಶವಿದ್ದರೆ ಬೇರೆಯವರಿಗೆ ಟಿಕೆಟ್ ಶಿಫಾರಸು ಮಾಡುತ್ತಿದ್ದೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.
‘ಪರಿಶಿಷ್ಟ ಜಾತಿ ನಾಯಕರನ್ನು ಸತೀಶ ಜಾರಕಿಹೊಳಿ ತುಳಿಯುತ್ತಿದ್ದಾರೆ’ ಎಂಬ ಶಾಸಕ ಮಹೇಂದ್ರ ತಮ್ಮಣ್ಣವರ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ, ‘ಲೋಕಸಭೆ ಚುನಾವಣೆಗೆ ಮತದಾನ ಇರುವ ಮೂರು ದಿನ ಮುನ್ನ ಮಹೇಂದ್ರ ಯಾರ ಕೈಗೂ ಸಿಗಲಿಲ್ಲ. ಅವರ ಸೋದರಮಾವನ ಪರ ಕೆಲಸ ಮಾಡಿದ್ದಾರೆ. ಇದು ಪಕ್ಷ ವಿರೋಧಿ ಚಟುವಟಿಕೆ’ ಎಂದು ಹೇಳಿದ್ದಾರೆ.
‘ತಮ್ಮ ಸೋದರಮಾವ ಶಂಭು ಕಲ್ಲೋಳಿಕರಗೆ ಕೇವಲ 3,000 ಮತಗಳು ಬಂದಿವೆ ಎಂದು ಶಾಸಕ ಮಹೇಂದ್ರ ಹೇಳಿದ್ದಾರೆ. ಅವರ ತಾಕತ್ತು ಕೂಡ ಅಷ್ಟೇ’ ಎಂದು ಲೇವಡಿ ಮಾಡಿದ್ದಾರೆ.