ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

LS POLLS | ದೇಶದಲ್ಲಿ ಕಾಂಗ್ರೆಸ್‌ 50 ಸ್ಥಾನವನ್ನೂ ಗೆಲ್ಲದು: ಜಗದೀಶ ಶೆಟ್ಟರ್‌

Published 2 ಏಪ್ರಿಲ್ 2024, 16:22 IST
Last Updated 2 ಏಪ್ರಿಲ್ 2024, 16:22 IST
ಅಕ್ಷರ ಗಾತ್ರ

ಬೆಳಗಾವಿ: ‘ಲೋಕಸಭೆ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಬಿಜೆಪಿ ಸಿದ್ಧತೆ ಮಾಡಿದೆ. ಆದರೆ, ಕಾಂಗ್ರೆಸ್‌ಗೆ 50 ಸ್ಥಾನ ಗೆಲ್ಲುವ ನಿರೀಕ್ಷೆಯೂ ಇಲ್ಲ. ಪ್ರಜ್ಞಾವಂತ ಮತದಾರರು ಯಾವ ಪಕ್ಷ ಬೇಕೆಂದು ಚಿಂತನೆ ಮಾಡಬೇಕು’ ಎಂದು ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಹೇಳಿದರು.

ನಗರದಲ್ಲಿ ಸೋಮವಾರ ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ್‌ ಆಯೋಜಿಸಿದ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರಧಾನಿ ಮೋದಿ ಅವರಂತಹ ಬಲಾಢ್ಯ ನಾಯಕತ್ವ ಒಂದು ಕಡೆಯಾದರೆ, ಮತ್ತೊಂದು ಕಡೆಗೆ ಕಾಂಗ್ರೆಸ್‌ನ ದುರ್ಬಲ ನಾಯಕತ್ವವಿದೆ. ಮೋದಿ ಅವರೇ ಮತ್ತೊಮ್ಮೆ ಪ್ರಧಾನಿ ಆಗಬೇಕು ಎನ್ನುವುದು ಎಲ್ಲರ ಆಶಯ. ಈ ನಿಟ್ಟಿನಲ್ಲಿ ಎಲ್ಲರೂ ಈ ಬಾರಿ ನನಗೆ ಆಶೀರ್ವಾದ ಮಾಡಬೇಕು’ ಎಂದು ಮನವಿ ಮಾಡಿದರು.

‘ನಾನು ಹೊರಗಿನವ ಎನ್ನುವ ವಿರೋಧಿಗಳ ಆರೋಪಕ್ಕೆ ಹುರುಳಿಲ್ಲ. ಬೆಳಗಾವಿಗೂ ನನಗೂ 30 ವರ್ಷಗಳ ನಂಟಿದೆ. ಹುಬ್ಬಳ್ಳಿ– ಧಾರವಾಡ ನನ್ನ ಜನ್ಮ ಭೂಮಿಯಾದರೆ ಬೆಳಗಾವಿ ನನ್ನ ಕರ್ಮಭೂಮಿ. ಸುರೇಶ ಅಂಗಡಿ ಅವರು ಬೆಳಗಾವಿ ಅಭಿವೃದ್ಧಿ ಬಗ್ಗೆ ಎಲ್ಲರೊಂದಿಗೂ ಚರ್ಚೆ ಮಾಡುತ್ತಿದ್ದರು. ಆಗ ನಾನು ಕೂಡ ಹಲವು ರೀತಿಯ ಸಲಹೆ ಕೊಟ್ಟಿದ್ದೇನೆ’ ಎಂದು ಸ್ಮರಿಸಿದರು.

‘ತಮ್ಮ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಇಲ್ಲಿನ ಶಾಸಕ ಅಭಯ ಪಾಟೀಲ ಎಂದಿಗೂ ಹಿಂದೆ ಬಿದ್ದಿಲ್ಲ. ಹೀಗಾಗಿ, ಈ ಕ್ಷೇತ್ರ ಮಾದರಿಯಾಗಿದೆ. ನಾನು ಸಂಸದನಾದರೆ ಬೆಳಗಾವಿಗೆ ಪ್ರಥಮ ಆದ್ಯತೆ ಕೊಡುತ್ತೇನೆ’ ಎಂದು ಜಗದೀಶ ಶೆಟ್ಟರ್ ಹೇಳಿದರು.

ಶಾಸಕ ಅಭಯ ಪಾಟೀಲ ಮಾತನಾಡಿ, ‘ಜನಸಂಘವನ್ನು ಕಟ್ಟಿ ಬೆಳೆಸಿದ ಬ್ರಾಹ್ಮಣ ಸಮಾಜ ಯಾವಾಗಲೂ ಹಿಂದುತ್ವಕ್ಕಾಗಿ ಬಿಜೆಪಿಯನ್ನು ಬೆಂಬಲಿಸುತ್ತ ಬಂದಿದೆ. ಬಿಜೆಪಿಯೆಂದರೆ ಬ್ರಾಹ್ಮಣ ಸಮಾಜವಾಗಿದೆ. ನೀವು ಮತ ಹಾಕುವ ಜತೆಗೆ ಇತರರನ್ನೂ ಮತ ಹಾಕುವಂತೆ ಪ್ರೇರೇಪಿಸಿ’ ಎಂದರು.

ಬ್ರಾಹ್ಮಣ ಸಮಾಜ ಟ್ರಸ್ಟ್‌ ಅಧ್ಯಕ್ಷ ರಾಮ ಭಂಡಾರಿ, ಭರತ ದೇಶಪಾಂಡೆ, ವಿಲಾಸ ಬಾದಾಮಿ, ವಿಲಾಸ ಜೋಶಿ, ದಿವಾಕರ ದೇಶಪಾಂಡೆ ಮತ್ತಿತರರು ಮಾತನಾಡಿದರು. ಮಹಾನಗರ ಪಾಲಿಕೆಯ ಪಿಡಬ್ಲುಡಿ ಕಮಿಟಿ ಅಧ್ಯಕ್ಷೆ ವಾಣಿ ಜೋಶಿ, ಜಯತೀರ್ಥ ಸವದತ್ತಿ, ಉಪಮೇಯರ್ ಆನಂದ ಚವ್ಹಾಣ, ಮಂಗೇಶ ಪವಾರ್, ನಿತಿನ್ ಜಾಧವ ಮತ್ತಿತರರು ಇದ್ದರು.

ಮನವಿ: ಧಾರವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ವಿರುದ್ಧ ನಡೆದ ಅಸಮಾಧಾನ ದೂರು ಮಾಡಬೇಕು ಎಂದು ಬ್ರಾಹ್ಮಣ ಸಮಾಜದಿಂದ ಜಗದೀಶ ಶೆಟ್ಟರ್‌ ಅವರಿಗೆ ಮನವಿ ಸಲ್ಲಿಸಲಾಯಿತು.

ಇದಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್‌, ‘ಈಗಾಗಲೇ ನನ್ನ ಪ್ರಯತ್ನ ನಡೆದಿದೆ. ನಾನೇ ಖುದ್ದಾಗಿ ಪ್ರಲ್ಹಾದ ಜೋಶಿ ಅವರೊಂದಿಗೂ ಮಾತನಾಡಿದ್ದೇನೆ’ ಎಂದರು.

ಇದೇ ವಿಚಾರವಾಗಿ ಅಖಿಲ ಕರ್ನಾಟಕ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಅವರೂ ಶಾಸಕ ಅಭಯ ಪಾಟೀಲ ಜತೆಗೆ ಮಾತುಕತೆ ನಡೆಸಿದರು.

ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕತ್ವ ನಿಭಾಯಿಸಿದ ಅನುಭವಿ ಶೆಟ್ಟರ್‌ ಒಂದು ಕಡೆ; ಖಾಲಿಡಬ್ಬಾ ಇನ್ನೊಂದು ಕಡೆ ಇದೆ. ಯಾರು ಬೇಕೋ ನೀವೇ ಆಯ್ಕೆ ಮಾಡಿಕೊಳ್ಳಿ
ಅಭಯ ಪಾಟೀಲ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT