ಬೆಳಗಾವಿ: ‘ಈ ದೇಶದಲ್ಲಿ ಸರ್ಕಾರಕ್ಕಿಂತ ಅಧಿಕಾರಿಗಳೇ ಬಲಿಷ್ಠರಾಗಿದ್ದಾರೆ. ಯಾವುದೇ ಸರ್ಕಾರ ಬರಲಿ, ಯಾರೇ ಸಚಿವರಾಗಲಿ. ಎಲ್ಲಕ್ಕಿಂತ ಅಧಿಕಾರಿಗಳೇ ಪವರ್ಫುಲ್’ ಎಂದು ಸಚಿವ ಸತೀಶ ಜಾರಕಿಹೊಳಿ ಬೇಸರ ವ್ಯಕ್ತಪಡಿಸಿದರು.
‘ನಾವು ಈ ವ್ಯವಸ್ಥೆ ಬದಲಾಯಿಸಲು ಯತ್ನಿಸಿದರೆ, ಅವರು ನಮ್ಮನ್ನೇ ಬದಲಿಸುತ್ತಾರೆ. ಹಳ್ಳಿಯಿಂದ ದೆಹಲಿಯವರೆಗೆ ಸಚಿವರಿಗಿಂತ ಅಧಿಕಾರಿಗಳೇ ಬಲಿಷ್ಠರಾಗಿ ಬೆಳೆದಿದ್ದಾರೆ’ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಜಿಲ್ಲೆಯಲ್ಲಿ ಅಧಿಕಾರಿಗಳ ನಡುವೆ ಸಮನ್ವಯತೆಯಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನಾವು ಒಬ್ಬರನ್ನು ಬಸ್ನಿಂದ ಕೆಳಗೆ ಇಳಿಸಿದರೆ, ಅವರು ಮತ್ತೆ ಹಿಂಬಾಗಿಲಿನಿಂದ ಅದೇ ಬಸ್ ಹತ್ತುತ್ತಾರೆ’ ಎಂದರು.
ಜಿಲ್ಲ ಉಸ್ತುವಾರಿ ಸಚಿವರೂ ಆದ ಸತೀಶ ಜಾರಕಿಹೊಳಿ, ಈಚೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದರು. ಅವರು ಮತ್ತೆ ಅದೇ ಸ್ಥಾನಕ್ಕೆ ವರ್ಗಾವಣೆ ಮಾಡಿಸಿಕೊಂಡು, ಬಂದ ಬಗ್ಗೆ ಸಚಿವರು ಬೇಸರ ವ್ಯಕ್ತಪಡಿಸಿದರು.