ಕಾಗವಾಡ: ಶಿರಗುಪ್ಪಿ ಶುಗರ್ ವರ್ಕ್ಸ್ ಸಕ್ಕರೆ ಕಾರ್ಖಾನೆಯ ರಾಸಾಯನಿಕ ಮಿಶ್ರಿತ ಕಲುಷಿತ ನೀರನ್ನು ಶೇಡಬಾಳ ಪಟ್ಟಣದ ಜಮೀನುಗಳಿಗೆ ಬಿಡದಂತೆ ಜಯಕರ್ನಾಟಕ ಸಂಘಟನೆಯ ಸದಸ್ಯರು ಹಾಗೂ ಸ್ಥಳೀಯ ರೈತರು ಕಾಗವಾಡ ಉಪ ತಹಶೀಲ್ದಾರ್ ಅಣ್ಣಾಸಾಹೇಬ ಕೋರೆ ಅವರಿಗೆ ಮನವಿ ಸಲ್ಲಿಸಿದರು.
ಜಯಕರ್ನಾಟಕ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಮಗದುಮ್ಮ, ಕಳೆದ ನಾಲ್ಕು ವರ್ಷಗಳ ಹಿಂದೆಯೇ ಮನವಿ ನೀಡಿ, ಕಲುಷಿತ ನೀರು ಬಿಡುವ ಪೈಪ್ಲೈನ್ ಕಾಮಗಾರಿಯನ್ನು ಬಂದ್ ಮಾಡಲಾಗಿತ್ತು. ಈಗ ಮತ್ತೆ ಕಾಮಗಾರಿ ಪ್ರಾರಂಭಿಸಿದ್ದು, ಆ ನೀರಿನಿಂದ ನಮ್ಮ ಜಮೀನುಗಳು ಹಾಳಾಗುತ್ತವೆ. ಸುತ್ತಮುತ್ತಲಿನ ಕುಡಿಯುವ ನೀರು ಮಲಿನಗೊಳ್ಳುತ್ತದೆ. ಹಾಗಾಗಿ ನೀರು ಬಿಡದಂತೆ ತಾಲ್ಲೂಕು ಆಡಳಿತ ಕಟ್ಟು ನಿಟ್ಟಿನ ಆದೇಶ ಹೊರಡಿಸಬೇಕು. ಕ್ರಮವಹಿಸದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಶೇಡಬಾಳ ಜಯಕರ್ನಾಟಕ ಸಂಘದ ಅಧ್ಯಕ್ಷ ವಿನೋದ ಕಾಂಬಳೆ,ಅನೀಲ ಹೆರಲೆ, ಆದಿನಾಥ ಲಾಟಕರ, ಸಂಜು ಅಲಾಸೆ, ಸುಕುಮಾರ ಪಾಟೀಲ, ರಾಜು ಅಲಾಸೆ, ಅನೀಲ ಇರಾಜ, ಅಣ್ಣಾಸಾಬ ಪಲ್ಲಕ್ಕಿ, ಸಂತೋಷ ತಳವಾರ, ಮಾರುತಿ ಪಾಟೀಲ, ಬಾಬಾಸಾಬ ಕಾಂಬಳೆ, ಜಗ್ಗು ಮರಾಠೆ ಇದ್ದರು.