ಖಾನಾಪುರ: ಕರ್ನಾಟಕದಲ್ಲಿ ವಾಸಿಸುತ್ತಿರುವ ಕನ್ನಡೇತರ ಭಾಷಿಕರು ಕನ್ನಡವನ್ನು ಒತ್ತಾಯಪೂರ್ವಕವಾಗಿ ಕಲಿಯುವ ಪರಿಸ್ಥಿತಿ ಇದೆ. ಆದರೆ ಸಾವಿರಾರು ವರ್ಷದ ಇತಿಹಾಸವುಳ್ಳ ಈ ಭಾಷೆಯನ್ನು ಇತರ ಭಾಷೆಯ ಜನರು ಒತ್ತಾಯಪೂರ್ವಕವಾಗಿ ಕಲಿಯದೇ ಪ್ರೀತಿಯಿಂದ ಕಲಿಯಬೇಕಾದ ಸನ್ನಿವೇಶಗಳು ನಿರ್ಮಾಣವಾಗಬೇಕು ಎಂದು ಶಾಸಕ ವಿಠ್ಠಲ ಹಲಗೇಕರ ಅಭಿಪ್ರಾಯ ಪಟ್ಟರು.
ಪಟ್ಟಣದ ಹೊರವಲಯದ ದುರ್ಗಾದೇವಿ ದೇವಾಲಯದ ಸಮುದಾಯ ಭವನದಲ್ಲಿ ಸ್ಥಳೀಯ ಕರುನಾಡು ಕನ್ನಡ ಸಂಘ ಈಚೆಗೆ ಏರ್ಪಡಿಸಿದ್ದ ಕರುನಾಡು ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ಇಂದಿನ ಪೀಳಿಗೆಯವರು ನಾಡು-ನುಡಿಗಾಗಿ ಶ್ರಮಿಸಿದ ನಮ್ಮ ಹಿರಿಯರ ತ್ಯಾಗ, ಬಲಿದಾನ, ಅಭಿಮಾನಗಳನ್ನು ಆದರ್ಶವಾಗಿರಿಸಿಕೊಂಡು ನಾಡು ನುಡಿಯ ಏಳ್ಗೆಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಬೈಲೂರ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಸಾಮಾಜಿಕ ಕಾರ್ಯಕರ್ತರ ಮಹಾಂತೇಶ ರಾಹೂತ ಮತ್ತು ಹಿರಿಯ ಸಾಹಿತಿ ಎಲ್.ಎಸ್. ಶಾಸ್ತ್ರಿ ಅವರಿಗೆ ಕರುನಾಡು ಸಂಘದಿಂದ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಜಗದೀಶ ಹೊಸಮನಿ ಆಶಯ ನುಡಿಗಳನ್ನಾಡಿದರು.
ವಿಚಾರ ಸಂಕಿರಣದಲ್ಲಿ ಹಿರಿಯ ಸಾಹಿತಿಗಳಾದ ರಾಮಕೃಷ್ಣ ಮರಾಠೆ, ಎಚ್.ಬಿ.ಕೋಲಕಾರ ಭಾಗವಹಿಸಿದ್ದರು. ಎಂ.ಬಿ. ಹೊಸಳ್ಳಿ ಮತ್ತು ಆನಂದ ಬಿಂಗೆ ಹಾಸ್ಯಗೋಷ್ಠಿ ನಡೆಸಿಕೊಟ್ಟರು. ಸಮಾರೋಪ ಕಾರ್ಯಕ್ರಮದಲ್ಲಿ ಡಯಟ್ ಉಪನ್ಯಾಸಕ ರವಿ ಭಜಂತ್ರಿ ಮಾತನಾಡಿದರು.
ಸಾಹಿತಿ ಬಸವರಾಜ ಗಾರ್ಗಿ, ವಿವೇಕ ಕುರಗುಂದ, ಐ.ಸಿ. ಸಾವಂತ, ವೀರಪ್ಪ ಬಿರಾದರ ಪಾಟೀಲ, ರವಿ ಕಾಡಗಿ, ಶಿವಾನಂದ ಹುಕ್ಕೇರಿ, ಮಲ್ಲೇಶಪ್ಪ ಬೆನಕಟ್ಟಿ, ಗಿರೀಶ ಕುರಹಟ್ಟಿ ಇದ್ದರು.