ಮೂಡಲಗಿ: ತಾಲ್ಲೂಕಿನ ಅವರಾದಿ ಸೇತುವೆಯಿಂದ ಘಟಪ್ರಭಾ ನದಿಯಲ್ಲಿ ಭಾನುವಾರ ಟ್ರ್ಯಾಕ್ಟರ್ ಮಗುಚಿ ಬಿದ್ದಿದ್ದರಿಂದ ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಮಂಗಳವಾರ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾರೆ.
ಪಶ್ಚಿಮ ಬಂಗಾಳದ ಚುರಕಾ ಸುರೇನ್ ಮೃತ ವ್ಯಕ್ತಿ.
ಸತತ ಮಳೆಯಿಂದ ಮುಳುಗಡೆಯಾಗಿದ್ದ ಸೇತುವೆ ಮೇಲೆ ಸಂಚಾರ ನಿರ್ಬಂಧಿಸಲಾಗಿತ್ತು. ಆದರೆ, ಅಪಾಯವನ್ನೂ ಲೆಕ್ಕಿಸದೆ ಈ ಸೇತುವೆ ಮೇಲೆ ಸಾಗುತ್ತಿದ್ದಾಗ, ಟ್ರ್ಯಾಕ್ಟರ್ನಲ್ಲಿದ್ದ 10 ಮಂದಿ ನೀರಿನ ಸೆಳವಿಗೆ ಸಿಲುಕಿ ಮುಳುಗುತ್ತಿದ್ದರು. ಈ ಪೈಕಿ 9 ಜನರು ಈಜಿ ದಡ ಸೇರಿದ್ದರು.
ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಹುಡುಕಾಟಕ್ಕಾಗಿ ಭಾನುವಾರದಿಂದಲೇ ಎನ್ಡಿಆರ್ಎಫ್, ಎಸ್ಡಿಆರ್ಎಫ್ ತಂಡದವರು ಮತ್ತು ಕುಲಗೋಡ ಠಾಣೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ಮಂಗಳವಾರ ಸೇತುವೆಯಿಂದ 1 ಕಿ.ಮೀ ಅಂತರದಲ್ಲಿರುವ ನದಿದಡದ ಪೊದೆಯಲ್ಲಿ ಶವ ಪತ್ತೆಯಾಗಿದೆ. ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.