ಬೆಳಗಾವಿ: ‘ನಾನು ಎಥೆನಾಲ್ ಇಂಧನ ಬಳಸಿದ ಕಾರನ್ನೇ ಓಡಿಸುತ್ತಿದ್ದೇನೆ. ಭವಿಷ್ಯದಲ್ಲಿ ಎಥೆನಾಲ್ ಅತ್ಯಂತ ಮಹತ್ವ ಪಡೆಯಲಿದೆ. ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯಲಾಗುತ್ತದೆ. ಅತಿ ಹೆಚ್ಚು ಕಾರ್ಖಾನೆಗಳೂ ಇವೆ. ನಿರಾತಂಕವಾಗಿ ಎಲ್ಲೆಡೆ ಎಥೆನಾಲ್ ಉತ್ಪಾದನೆಗೆ ಮುಂದಾಗಬೇಕು’ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸಲಹೆ ನೀಡಿದರು.
ನಗರದಲ್ಲಿ ಗುರುವಾರ ವಿವಿಧ ರಾಷ್ಟ್ರೀಯ ಹೆದ್ದಾರಿಗಳ ಉದ್ಘಾಟನೆ ಹಾಗೂ 18 ಹೊಸ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ‘ಈಗಾಗಲೇ ಪೆಟ್ರೋಲ್ ಬದಲಾಗಿ ಎಥೆನಾಲ್ ಬಳಕೆ ಆರಂಭವಾಗಿದೆ. ಇದು ಪ್ರಕೃತಿ ಪ್ರಿಯವಾದ ಇಂಧನ. ಕೇಂದ್ರ ಸರ್ಕಾರವು ಎಥೆನಾಲ್ ಪಂಪ್ ಸ್ಥಾಪನೆಗೆ ಪರವಾನಗಿ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಭಾರತವು ಜಗತ್ತಿಗೆ ಅತಿ ಹೆಚ್ಚು ಎಥೆನಾಲ್ ಸರಬರಾಜು ಮಾಡುವ ದೇಶವಾಗಲಿದೆ’ ಎಂದರು.
‘ಜಿಲ್ಲೆಯ ರೈತರು ಎಥೆನಾಲ್ ಉತ್ಪಾದನೆಗೆ ಗಮನ ಕೊಡಬೇಕು. ಇದಕ್ಕೆ ಬೇಕಾದ ಪ್ರೋತ್ಸಾಹ ನೀಡಲು ರಾಜ್ಯ ಸರ್ಕಾರ ಮುಂದಾಗಬೇಕು’ ಎಂದೂ ಅವರು ಸಚಿವ ಸತೀಶ ಜಾರಕಿಹೊಳಿ ಅವರಿಗೆ ಹೇಳಿದರು.
‘ವಿಮಾನ ಇಂಧನ ಕೇಂದ್ರವಾಗಿಯೂ ಬೆಳಗಾವಿ ಬೆಳೆಯಲಿದೆ. ಎಥೆನಾಲ್ ಹಾಗೂ ವಿಮಾನ ಇಂಧನಗಳ ಉತ್ಪಾದನೆಯ ಮೂಲ ರೈತರೇ ಆಗಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ರೈತರು ಅನ್ನದಾತರು ಮಾತ್ರವಲ್ಲ; ಉದ್ಯೋಗ ದಾತರೂ, ವಿದ್ಯುತ್ ಉತ್ಪಾದಕರೂ ಆಗಲಿದ್ದಾರೆ’ ಎಂದರು.