ಬೈಲಹೊಂಗಲ: ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ಅಧಿನಿಯಮ 2024 ಜಾರಿಯಾಗಿದ್ದರ ಹಿನ್ನೆಲೆಯಲ್ಲಿ ಅನ್ಯ ಭಾಷೆಯ ನಾಮ ಫಲಕಗಳನ್ನು ಪುರಸಭೆ ಮುಖ್ಯಾಧಿಕಾರಿ ವೀರೇಶ ಹಸಬಿ ನೇತೃತ್ವದಲ್ಲಿ ಬುಧವಾರ ತೆರವುಗೊಳಿಸಲಾಯಿತು.
ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಅಂಗಡಿ, ವಾಣಿಜ್ಯ ಸಂಕೀರ್ಣಗಳ ಹಾಗೂ ಎಲ್ಲ ವ್ಯವಹಾರ ಉದ್ಯಮಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಶೇ60 ರಷ್ಟು ಮೇಲ್ಬಾಗದಲ್ಲಿ ಪ್ರಧಾನವಾಗಿ ಅಳವಡಿಸುವಂತೆ ಸೂಚನೆ ನೀಡಲಾಯಿತು.
ಮುಖ್ಯಾಧಿಕಾರಿ ವೀರೇಶ ಹಸಬಿ ಮಾತನಾಡಿ, ‘ಈಗಾಗಲೇ ನಾಮಫಲಕಗಳಿಗೆ ಶೇ60ರಷ್ಟು ಕನ್ನಡವನ್ನು ಮೇಲ್ಭಾಗದಲ್ಲಿ ಪ್ರಧಾನವಾಗಿ ಬಳಸುವಂತೆ ಹಲವಾರು ಬಾರಿ ನೋಟಿಸ್ ಮೂಲಕ ಹಾಗೂ ಧ್ವನಿವರ್ದಕ ಪ್ರಚಾರ ಮೂಲಕ ತಿಳಿವಳಿಕೆ ನೀಡಲಾಗಿದೆ. ಸ್ಪಂದಿಸದ ಅಂಗಡಿಕಾರರ ನಾಮಫಲಕ ತೆರವುಗೊಳಿಸಲಾಗುತ್ತಿದೆ. ತೆರವು ಕಾರ್ಯಾಚರಣೆ ಮುಂದುವರಿಸಲಾಗುವುದು. ಇದಕ್ಕೆ ಆಸ್ಪದ ಕೊಡದೆ ಪುರಸಭೆ ವ್ಯಾಪ್ತಿಯಲ್ಲಿನ ಎಲ್ಲ ಅಂಗಡಿ, ವ್ಯವಹಾರ ಉದ್ಯಮದಾರರು ಸ್ಪಂದಿಸಬೇಕು’ ಎಂದರು.
ಸಮುದಾಯ ಸಂಘಟಕ ರಮೇಶ ಹಿಟ್ಟಣಗಿ, ಕಂದಾಯ ಅಧಿಕಾರಿ ಎಸ್.ಆರ್. ಹಳ್ಳೂರ, ಕಿರಿಯ ಆರೋಗ್ಯ ನಿರೀಕ್ಷಕ ಸುರೇಶ ಪಾಟೀಲ, ಸಿಬ್ಬಂದಿ ಬಿ.ಐ.ಗುಡಿಮನಿ, ಎಸ್.ಎಸ್. ದುರದುಂಡಿ, ಎಸ್.ಎಸ್. ನರಗುಂದ ಆರೋಗ್ಯ ವಿಭಾಗದ ಸಿಬ್ಬಂದಿ ಇದ್ದರು.