ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಧೈರ್ಯದಿಂದ ಕೆಲಸ ಮಾಡಿ: ಕಮಿಷನರ್ ಸಿದ್ರಾಮಪ್ಪ

Published 28 ಫೆಬ್ರುವರಿ 2024, 4:28 IST
Last Updated 28 ಫೆಬ್ರುವರಿ 2024, 4:28 IST
ಅಕ್ಷರ ಗಾತ್ರ

ಬೆಳಗಾವಿ: 'ಪೊಲೀಸ್ ಇಲಾಖೆಯಲ್ಲಿ ಕೆಲಸ‌ ಮಾಡುವವರು ಸಂದರ್ಭಕ್ಕೆ ತಕ್ಕಂತೆ ಧೈರ್ಯದಿಂದ ಕೆಲಸ ಮಾಡಬೇಕು' ಎಂದು ನಗರ ಪೊಲೀಸ್ ಕಮಿಷನರ್ ಎಸ್.ಎನ್.ಸಿದ್ರಾಮಪ್ಪ ಕರೆ ನೀಡಿದರು.

ಇಲ್ಲಿನ ಪೊಲೀಸ್ ಕವಾಯತು ಮೈದಾನದಲ್ಲಿ ತಮ್ಮ ಸೇವಾನಿವೃತ್ತಿ ಹಿನ್ನೆಲೆಯಲ್ಲಿ ಪೊಲೀಸರಿಂದ ಬುಧವಾರ ಗೌರವವಂದನೆ ಸ್ವೀಕರಿಸಿ ಅವರು ಮಾತನಾಡಿದರು‌.

'ಬೆಳಗಾವಿಯಲ್ಲಿ ನಡೆಯುವ ಗಣೇಶ ಉತ್ಸವದ ವಿಸರ್ಜನೆಯಂಥ ಸಂದರ್ಭ ನಾವು 18ರಿಂದ 20 ತಾಸು ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ ಆರೋಗ್ಯ ಕಾಪಾಡಿಕೊಳ್ಳಬೇಕು. ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಪೊಲೀಸ್ ಇಲಾಖೆ ಘನತೆಗೆ ಚ್ಯುತಿ ಬಾರದಂತೆ, ನಾವು ಜನಸ್ನೇಹಿಯಾಗಿ ಕೆಲಸ ಮಾಡಬೇಕು' ಎಂದರು.

'ಯಾವುದೇ ಕೆಲಸದಲ್ಲಿ ಒಗ್ಗಟ್ಟು ಬಹಳ ಮುಖ್ಯ. ನಮ್ಮಲ್ಲಿ ಏನೇ ಭಿನ್ನಾಭಿಪ್ರಾಯಗಳಿದ್ದರೂ, ತಕ್ಷಣ ಬಗೆಹರಿಸಿಕೊಳ್ಳಬೇಕು. ಒಗ್ಗಟ್ಟಿನಿಂದ ಇದ್ದರೆ ಯಾವುದೇ ಪರಿಸ್ಥಿತಿ ಸುಲಭವಾಗಿ ನಿಭಾಯಿಸಬಹುದು' ಎಂದು ಹೇಳಿದರು.

'ಆರಕ್ಷಕರು ಜಾತ್ಯತೀತ ಮನೋಭಾವ ಬೆಳೆಸಿಕೊಳ್ಳಬೇಕು. ಅನ್ಯಾಯವಾದವರಿಗೆ ನ್ಯಾಯ ಒದಗಿಸಲು ಶ್ರಮಿಸಬೇಕು' ಎಂದೂ ಕರೆ ನೀಡಿದರು‌.

'ಆರಂಭದಲ್ಲಿ ಪೊಲೀಸ್ ಇಲಾಖೆಗೆ ಸೇರಬೇಕೋ, ಬೇಡವೋ ಎಂಬ ಗೊಂದಲದಲ್ಲಿದ್ದೆ. ಆದರೆ, ಮೇಲಧಿಕಾರಿಗಳ ಮಾರ್ಗದರ್ಶನ, ಸಹೋದ್ಯೋಗಿಗಳ ಸಹಕಾರದಿಂದ ಉತ್ತಮ ಕೆಲಸ ಮಾಡಿದೆ. ಹಲವು ಸವಾಲುಗಳನ್ನು ಎದುರಿಸಿ, ನಾನಾ ಅಪರಾಧ ಪ್ರಕರಣಗಳನ್ನು ಬೇಧಿಸಿದ್ದೇನೆ. ನನ್ನ ಅಧಿಕಾರಾವಧಿಯಲ್ಲಿ ಉತ್ತಮವಾಗಿ ಕೆಲಸ ಮಾಡಿದ ತೃಪ್ತಿಯಿದೆ' ಎಂದರು.

ನಗರ ಪೊಲೀಸ್ ಉಪ ಆಯುಕ್ತರಾದ ರೋಹನ್ ಜಗದೀಶ, ಪಿ.ವಿ.ಸ್ನೇಹಾ, ಪೊಲೀಸ್‌ ಅಧಿಕಾರಿಗಳು, ಉದ್ಯಮಿಗಳು, ವೈದ್ಯರು, ವಿವಿಧ ಸಂಘಟನೆಯವರು ಹಾಜರಿದ್ದರು.

ಪೊಲೀಸರು ಆಕರ್ಷಕವಾಗಿ ಪಥಸಂಚಲನ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT