ಬೆಳಗಾವಿ: ‘ನರೇಗಾ ಯೋಜನೆಯಡಿ ದುಡಿಯುವ ಕೃಷಿ ಕಾರ್ಮಿಕರಿಗೆ ವಾರ್ಷಿಕ ಕನಿಷ್ಠ 200 ದಿನ ಕೆಲಸ ನೀಡಬೇಕು’ ಎಂದು ಆಗ್ರಹಿಸಿ, ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯವರು ಇಲ್ಲಿನ ರಾಣಿ ಚನ್ನಮ್ಮನ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಆರ್ಥಿಕ ಸಂಕಷ್ಟದಲ್ಲಿರುವ ರೈತರು ಹಾಗೂ ಕಾರ್ಮಿಕರ ಸಾಲ ಮನ್ನಾ ಮಾಡಬೇಕು. ಡಾ.ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು. ದೇಶದಾದ್ಯಂತ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಗೊಳಿಸಬೇಕು ಸೇರಿದಂತೆ ಅನೇಕ ಬೇಡಿಕೆ ಮಂಡಿಸಿದರು.
ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿ, ಜಿಲ್ಲಾಡಳಿತ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸಿದಗೌಡ ಮೋದಗಿ, ಡಾ.ಜನಾರ್ದನ್, ಮಂದಾ ನೇವಗಿ, ನಾಗೇಶ ಸಾತೇರಿ, ಮಲ್ಲಿಕಾರ್ಜುನ ಡೊಂಗರಗಾವಿ, ಸಂಜು ಡೊಂಗರಗಾವಿ, ಶಿವಲೀಲಾ ಮಿಸಾಳೆ, ಗೀತಾ ಧರೆಣ್ಣವರ ಇತರರಿದ್ದರು.