ಬೆಳಗಾವಿ: ನಗರದಲ್ಲಿ ತೆರೆಯಲಾಗಿದ್ದ ಮಹಾರಾಷ್ಟ್ರ ಸರ್ಕಾರದ ಮಹಾತ್ಮ ಜ್ಯೋತಿರಾವ್ ಫುಲೆ ಜನಾರೋಗ್ಯ ವಿಮೆ ಯೋಜನೆಯ ನಾಲ್ಕು ಸೇವಾ ಕೇಂದ್ರಗಳಿಗೆ ಜಿಲ್ಲಾಡಳಿತ ಶನಿವಾರ ಬೀಗ ಹಾಕಿದೆ.
ಕರ್ನಾಟಕದ ಗಡಿಯೊಳಗಿನ 865 ಹಳ್ಳಿ– ಪಟ್ಟಣಗಳಲ್ಲಿ ಇರುವ ಮರಾಠಿ ಭಾಷಿಗರಿಗಾಗಿ ಈ ವಿಮಾ ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ. ಮಹಾರಾಷ್ಟ್ರ ಸರ್ಕಾರವು ಬೆಳಗಾವಿಯಲ್ಲಿ ನಾಲ್ಕು ಸೇವಾ ಕೇಂದ್ರಗಳನ್ನು ತೆರೆದು ಅರ್ಜಿ ವಿತರಣೆ, ‘ನಾನು ಮರಾಠಿ ಭಾಷಿಗ’ ಎಂಬ ಮುಚ್ಚಳಿಕೆ ಪತ್ರ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಶಿಫಾರಸು ಪತ್ರಗಳನ್ನೂ ನೀಡುತ್ತಿತ್ತು.
‘ಈ ಸೇವಾ ಕೇಂದ್ರಗಳು ಅನಧಿಕೃತವಾಗಿವೆ. ಮರಾಠಿಗರನ್ನು ರಾಜ್ಯದ ವಿರುದ್ಧ ಎತ್ತಿಕಟ್ಟಲು ಮಹಾರಾಷ್ಟ್ರ ಇಂಥ ಹೆಜ್ಜೆ ಇಟ್ಟಿದೆ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯಿಂದ ದೂರು ಸಲ್ಲಿಸಲಾಗಿದೆ. ಇದರ ಆಧಾರದ ಮೇಲೆ ನಾಲ್ಕೂ ಸೇವಾ ಕೇಂದ್ರಗಳ ಮೇಲೆ ದಾಳಿ ನಡೆಸಲಾಯಿತು. ಯಾವುದೇ ಅನುಮತಿ ಇಲ್ಲದೇ ಹೊರರಾಜ್ಯದ ಜನಾರೋಗ್ಯ ವಿಮೆಯ ಕೆಲಸಗಳನ್ನು ಮಾಡುತ್ತಿರುವುದು ಕಂಡುಬಂದಿದ್ದರಿಂದ ಕೇಂದ್ರಗಳನ್ನು ಬಂದ್ ಮಾಡಲಾಗಿದೆ. ಕಾರಣ ಕೇಳಿ ನೋಟಿಸ್ ಕೂಡ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಗಡಿ ವಿವಾದ ಸುಪ್ರೀಂ ಕೋರ್ಟ್ನಲ್ಲಿದೆ. ರಾಜ್ಯದಲ್ಲಿರುವ ಮರಾಠಿಗರೆಲ್ಲ ಮಹಾರಾಷ್ಟ್ರದ ಪರ ಇದ್ದಾರೆ ಎಂಬ ದಾಖಲೆ ಸೃಷ್ಟಿಸುವ ಉದ್ದೇಶದಿಂದ ಏಕನಾಥ ಶಿಂಧೆ ಸರ್ಕಾರ ಈ ವಿಮೆ ಜಾರಿ ಮಾಡಿದೆ ಎಂದು ಕನ್ನಡ ಹೋರಾಟಗಾರರು ದೂರಿದ್ದರು. ಈ ಬಗ್ಗೆ ‘ಪ್ರಜಾವಾಣಿ’ ಬೆಳಕು ಚೆಲ್ಲಿತ್ತು.