ಬೆಳಗಾವಿ: ಮಳೆಗಾಲ ಮತ್ತೆ ಬಂದಿದೆ. 2024–25ನೇ ಸಾಲಿನ ತರಗತಿಗಳ ಆರಂಭಕ್ಕೆ ಒಂದೇ ವಾರ ಬಾಕಿ ಇದೆ. ಈ ಮಧ್ಯೆ, ಮುಂಗಾರು ಪೂರ್ವದಲ್ಲಿ ಜೋರಾಗಿ ಸುರಿಯುತ್ತಿರುವ ಮಳೆ– ಗಾಳಿಯಿಂದ ಶಾಲೆಗಳ ಪತ್ರಾಸ್ ಹಾರಿಹೋಗುವುದು, ಗೋಡೆ ಕುಸಿಯುವುದು ಸಾಮಾನ್ಯವಾಗಿದೆ.
ಆದರೆ, ಜಿಲ್ಲೆಯ ಹಲವು ಸರ್ಕಾರಿ ಶಾಲೆಗಳು ಶಿಥಿಲ ಕೊಠಡಿಗಳಿಂದ ಎದುರಿಸುತ್ತಿರುವ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ಈ ವರ್ಷವೂ ವಿದ್ಯಾರ್ಥಿಗಳು ಅದೇ ಕೊಠಡಿಗಳಲ್ಲೇ ಆತಂಕದಿಂದ ಓದುವುದು ತಪ್ಪಿಲ್ಲ.
ಇತ್ತೀಚೆಗೆ ಸುರಿದ ಮಳೆ, ಜೋರಾಗಿ ಬೀಸುತ್ತಿರುವ ಗಾಳಿಯಿಂದಾಗಿ ವಿವಿಧ ಶಾಲೆಗಳಲ್ಲಿ ಅವಾಂತರ ನಡೆಯುತ್ತಲೇ ಇವೆ. ಆದರೆ, ಮಕ್ಕಳ ಸುರಕ್ಷತೆ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆ ಹೆಜ್ಜೆಯಿಟ್ಟಿಲ್ಲ.
2019ರಲ್ಲಿ ಜಿಲ್ಲೆಯಲ್ಲಿ ಭೀಕರ ಪ್ರವಾಹ ಉಂಟಾಗಿತ್ತು. ಮಲಪ್ರಭಾ, ಘಟಪ್ರಭಾ, ಕೃಷ್ಣಾ ಮತ್ತು ಉಪನದಿಗಳು ಉಕ್ಕಿ ಹರಿದಿದ್ದರಿಂದ ಸರ್ಕಾರಿ ಶಾಲೆಗಳ ಕೊಠಡಿಗಳಿಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿತ್ತು. ಬಳಿಕ ಮಳೆಯಿಂದಲೂ ಹಲವು ಕೊಠಡಿಗಳು ಹಾಳಾಗಿದ್ದವು. ಆದರೆ, ಈವರೆಗೆ ಹಲವು ಕೊಠಡಿಗಳಿಗೆ ದುರಸ್ತಿ ಕಂಡಿಲ್ಲ. ಮಳೆಗಾಲಕ್ಕೂ ಮುನ್ನ, ಶಿಥಿಲಗೊಂಡ ಶಾಲೆಗಳ ಚಿತ್ರಣ ಬದಲಾಗಬಹುದೆಂಬ ಪಾಲಕರ ನಿರೀಕ್ಷೆಯೂ ಹುಸಿಯಾಗಿದೆ.
ಖಾನಾಪುರ: ಬಹುಪಾಲು ಅರಣ್ಯ ಹಾಗೂ ಗುಡ್ಡಗಾಡು ಪ್ರದೇಶದಿಂದ ಆವೃತ್ತವಾದ ಖಾನಾಪುರ ತಾಲ್ಲೂಕಿನ 16 ಪ್ರಾಥಮಿಕ ಶಾಲೆಗಳ ಕೊಠಡಿ ಕಳೆದ ವರ್ಷ ಅತಿವೃಷ್ಟಿಯಿಂದ ಶಿಥಿಲಗೊಂಡಿವೆ.
ತಾಲ್ಲೂಕಿನಲ್ಲಿ 328 ಪ್ರಾಥಮಿಕ ಹಾಗೂ 72 ಪ್ರೌಢಶಾಲೆ ಇವೆ. ನರೇಗಾ ಯೋಜನೆ, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ, ಹಳೆಯ ವಿದ್ಯಾರ್ಥಿಗಳು ಮತ್ತು ದಾನಿಗಳ ನೆರವಿನಿಂದ ಹಲವು ಶಾಲೆಗಳು ಅಭಿವೃದ್ಧಿಗೊಂಡಿವೆ. ಆದರೆ, ಶಿಥಿಲಗೊಂಡ ಶಾಲೆಗಳ ಸ್ಥಿತಿ ಸುಧಾರಣೆಯಾಗಿಲ್ಲ.
ಖಾನಾಪುರ ಪಟ್ಟಣದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ, ತಾಲ್ಲೂಕಿನ ಗರ್ಲಗುಂಜಿ, ಮುಡೇವಾಡಿ, ಇಟಗಿ, ಗಂದಿಗವಾಡ, ಬೀಡಿ, ನಂದಗಡ, ಲಿಂಗನಮಠ ಸರ್ಕಾರಿ ಶಾಲೆಗಳ ಕೊಠಡಿ ಶಿಥಿಲವಾಗಿದ್ದು, ಮಕ್ಕಳು ಆತಂಕದಲ್ಲೇ ಓದುವ ಅನಿವಾರ್ಯತೆ ಸೃಷ್ಟಿಯಾಗಿದೆ.
‘ಇತ್ತೀಚಿನ ವರ್ಷಗಳಲ್ಲಿ ಅತಿವೃಷ್ಟಿಯಿಂದ ಶಿಥಿಲಗೊಂಡ ವಿವಿಧ ಶಾಲೆಗಳ ವಿವರವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಕೆಲವು ಶಾಲೆಗಳ ಕೊಠಡಿ ದುರಸ್ತಿ ಮಾಡಲಾಗಿದೆ’ ಎಂದು ಬಿಇಒ ಕಚೇರಿ ಮೂಲಗಳು ತಿಳಿಸಿವೆ.
ಸವದತ್ತಿ: ತಾಲ್ಲೂಕಿನಲ್ಲಿ 235 ತರಗತಿ ಕೊಠಡಿಗಳು ಶಿಥಿಲ ಹಂತಕ್ಕೆ ತಲುಪಿವೆ. ಕೆಲವೆಡೆ ಆ ಕೊಠಡಿಗಳನ್ನು ಮುಚ್ಚಿ, ಸುರಕ್ಷಿತವಾದ ಕೊಠಡಿಗಳಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಕೆಲವೆಡೆ ಶಿಥಿಲಗೊಂಡ ಕೊಠಡಿಯೇ ಇಂದಿಗೂ ಪಾಠ ಬೋಧನೆಗೂ ಬಳಕೆಯಾಗುತ್ತಿದ್ದು, ಮಕ್ಕಳಿಗೆ ಸುರಕ್ಷತೆಯೇ ಇಲ್ಲದಂತಾಗಿದೆ.
‘192 ಹೊಸ ಕೊಠಡಿಗಳ ನಿರ್ಮಾಣ ಹಾಗೂ ಕೆಲವು ಕೊಠಡಿಗಳ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಪ್ರಸ್ತಾವ ಸಿದ್ಧಪಡಿಸಿ ಕಳುಹಿಸಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ತಿಳಿಸಿದರು.
ಮೂಡಲಗಿ: ಇತ್ತೀಚೆಗೆ ಬೀಸಿದ ಬಿರುಗಾಳಿಯಿಂದಾಗಿ ಮೂಡಲಗಿ ವಲಯದ ಪಟಗುಂದಿಯ ಸರ್ಕಾರಿ ಪ್ರಾಥಮಿಕ ಶಾಲೆಯ ತಗಡಿನ ಶೀಟುಗಳಿಗೆ ಹಾನಿಯಾಗಿದೆ.
‘ಮೂಡಲಗಿಯ ಶೈಕ್ಷಣಿಕ ವಲಯದಲ್ಲಿ 30 ತರಗತಿ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು, ಅವುಗಳನ್ನು ಕಲಿಕೆಗೆ ಬಳಸದಂತೆ ಆಯಾ ಶಾಲಾ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಜೋಕಾನಟ್ಟಿಯ ಗಾಂಧಿ ನಗರದ ಶಾಲೆ, ಹೊನಕುಪ್ಪಿ ಶಾಲೆಯಲ್ಲಿ ಆಲಿಕಲ್ಲು ಮಳೆಗೆ ಹೆಂಚು ಒಡೆದಿವೆ. ಯಾದವಾಡದ ಗಂಡು ಮಕ್ಕಳ ಶಾಲೆ, ಹೊಸಟ್ಟಿ, ಅವರಾದಿಯ ಶಾಲೆ ಕೊಠಡಿಗಳು ಶಿಥಿಲಗೊಂಡಿದ್ದು, ಮರುನಿರ್ಮಾಣ ಆಗಬೇಕಾಗಿದೆ. ಶಿಥಿಲಗೊಂಡಿರುವ ಮತ್ತು ಅಪಾಯದ ಹಂತದಲ್ಲಿರುವ ಕೊಠಡಿಗಳನ್ನು ನೆಲಸಮ ಮಾಡಿ, ಮರು ನಿರ್ಮಾಣ ಮಾಡುವಂತೆ ಇಲಾಖೆಗೆ ಪ್ರಸ್ತಾವ ಕಳುಹಿಸಲಾಗಿದೆ’ ಎಂದರು.
ರಾಮದುರ್ಗ: ತಾಲ್ಲೂಕಿನಲ್ಲಿ 213 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿವೆ. ಈ ಪೈಕಿ ಹಲವು ಶಾಲೆಗಳ ಕೊಠಡಿ ಶಿಥಿಲವಾಸ್ಥೆ ತಲುಪಿದ್ದು, ಮಕ್ಕಳ ಕಲಿಕೆಗೆ ತೊಂದರೆಯಾಗಿದೆ. ಸಾಲಾಪುರ, ಕೆ.ಚಂದರಗಿ ಮತ್ತು ಲಕನಾಯನಕೊಪ್ಪದಲ್ಲಿ ಹೆಚ್ಚುವರಿ ಕೊಠಡಿಗಳ ಅಗತ್ಯವಿದೆ. ಅಂತೆಯೇ, 13 ಕೊಠಡಿಗಳು ದುರಸ್ತಿಗೆ ಕಾದಿವೆ.
ಗೋಕಾಕ ಶೈಕ್ಷಣಿಕ ವಲಯದಲ್ಲಿ 288 ಸರ್ಕಾರಿ ಪ್ರಾಥಮಿಕ ಹಾಗೂ 44 ಪ್ರೌಢಶಾಲೆಗಳಿವೆ. 2019ರಲ್ಲಿ ಸುರಿದ ಭಾರಿ ಮಳೆಯಿಂದ ಭಾಗಶಃ ಹಾನಿಗೀಡಾಗಿದ್ದ ಶಾಲೆಗಳನ್ನು ದುರಸ್ತಿ ಮಾಡಲಾಗಿದೆ. ಇದರಿಂದಾಗಿ ಆ ಕಟ್ಟಡಗಳಲ್ಲಿ ಮಕ್ಕಳ ಆತಂಕ ರಹಿತವಾಗಿ ಓದುತ್ತಿದ್ದಾರೆ.
‘ನಮ್ಮಲ್ಲಿ ಮಕ್ಕಳ ಕಲಿಕೆಗೆ ಕೊಠಡಿಗಳ ಕೊರತೆ ಇಲ್ಲ. ಶಿಥಿಲ ಕಟ್ಟಡಗಳಿಂದ ತೊಂದರೆಯಾಗಿಲ್ಲ’ ಎನ್ನುತ್ತಾರೆ ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ.
ಬೈಲಹೊಂಗಲ ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿರುವ ಬಹುಪಾಲು ಶಾಲೆಗಳು ದಯನೀಯ ಸ್ಥಿತಿಯಲ್ಲಿವೆ. ಬೈಲಹೊಂಗಲ ವಲಯದ 45ಕ್ಕೂ ಅಧಿಕ ಶಾಲೆಗಳ ಕೊಠಡಿ, ಚಾವಣಿ, ಗೋಡೆ ಒಡೆದಿದ್ದು, ಮಕ್ಕಳ ಅಭ್ಯಾಸಕ್ಕೆ ತೊಂದರೆಯಾಗುತ್ತಿದೆ. 30 ಕೊಠಡಿಗಳ ದುರಸ್ತಿ ಕಾರ್ಯ ನಡೆದಿದೆ. ಮತ್ತಷ್ಟು ಶಾಲೆಗಳ ದುರಸ್ತಿಗೆ ಅನುದಾನ ಕೋರಿ, ಶಿಕ್ಷಣ ಇಲಾಖೆಯು ತಾಲ್ಲೂಕು ಪಂಚಾಯ್ತಿ ಕಚೇರಿಗೆ ಕ್ರಿಯಾ ಯೋಜನೆ ಸಲ್ಲಿಸಿದೆ.
(ಪೂರಕ ಮಾಹಿತಿ: ಚನ್ನಪ್ಪ ಮಾದರ, ಪ್ರದೀಪ ಮೇಲಿನಮನಿ, ಪ್ರಸನ್ನ ಕುಲಕರ್ಣಿ, ರಾಮೇಶ್ವರ ಕಲ್ಯಾಣಶೆಟ್ಟಿ, ಬಾಲಶೇಖರ ಬಂದಿ, ಚಂದ್ರಶೇಖರ ಚಿನಕೇಕರ, ರವಿ ಹುಲಕುಂದ)
ಶಿಥಿಲಗೊಂಡ ಕೊಠಡಿಗಳನ್ನು ನೆಲಸಮ ಮಾಡಿ ಹೊಸ ಕಟ್ಟಡಗಳ ಮರುನಿರ್ಮಾಣಕ್ಕೆ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ವಿವಿಧ ಅನುದಾನಗಳಡಿ ಕೆಲವೆಡೆ ಅಭಿವೃದ್ಧಿ ಕಾಮಗಾರಿ ನಡೆದಿವೆ. ಈ ಮಳೆಗಾಲದಲ್ಲಿ ಮಕ್ಕಳಿಗೆ ಯಾವ ತೊಂದರೆ ಆಗದಂತೆ ಕ್ರಮ ವಹಿಸುತ್ತೇವೆ.–ಮೋಹನಕುಮಾರ ಹಂಚಾಟೆ ಉಪನಿರ್ದೇಶಕ ಶಾಲಾ ಶಿಕ್ಷಣ ಇಲಾಖೆ ಚಿಕ್ಕೋಡಿ
ಚಿಕ್ಕೋಡಿ ವಲಯದಲ್ಲಿ ಶಿಥಿಲಗೊಂಡ ಕೊಠಡಿಗಳಲ್ಲಿ ತರಗತಿ ನಡೆಸುತ್ತಿಲ್ಲ. ಸಣ್ಣ–ಪುಟ್ಟ ದುರಸ್ತಿ ಕಾರ್ಯಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದು.-ಬಿ.ಎ.ಮೇಕನಮರಡಿ ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕೋಡಿ
ಕಳೆದ ಮಳೆಗಾಲದಲ್ಲಿ ಹೆಚ್ಚು ಸೋರುತ್ತಿದ್ದ ಕೊಠಡಿಗಳ ಮೇಲೆ ತಗಡಿನ ಶೀಟುಗಳನ್ನು ಹಾಕಿ ನೀರು ಸೋರದಂತೆ ಕ್ರಮ ತೆಗೆದುಕೊಳ್ಳಲಾಗಿದೆ.–ಗಾಯತ್ರಿ ಅಜ್ಜನ್ನವರ ಶಿಕ್ಷಣಾಧಿಕಾರಿ ಚನ್ನಮ್ಮನ ಕಿತ್ತೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.