ಬೆಳಗಾವಿ: ‘ಜಾಗತಿಕ ಸಾಹಿತ್ಯ ಅಧ್ಯಯನ ಮಾಡುವಾಗ ವಚನಗಳ ಅಭಿವ್ಯಕ್ತಿ ಕ್ರಮವನ್ನು ಗಮನಿಸಿದರೆ ಲೋಕ ವಿಸ್ಮಯವೆನಿಸುತ್ತದೆ’ ಎಂದು ಪ್ರೊ.ಮೈತ್ರೇಯಣಿ ಗದಿಗೆಪ್ಪಗೌಡರ ಹೇಳಿದರು.
ಇಲ್ಲಿನ ಕಾರಂಜಿ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ನಡೆದ ಎರಡನೇಯ ಸೋಮವಾರದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ‘12ನೇ ಶತಮಾನದಲ್ಲಿ ಕೆಳವರ್ಗದ, ಅನಕ್ಷರಸ್ಥ ವಚನಕಾರ್ತಿಯರು ಅಡುಗೆ ಮನೆಯಿಂದ ಅನುಭವ ಮಂಟಪದವರೆಗೆ ಬಂದು ತಮ್ಮ ಅನುಭಾವಕ್ಕೆ ಅಭಿವ್ಯಕ್ತಿ ನೀಡುವ ಮೂಲಕ ವಚನ ಸೃಷ್ಟಿಗೆ ಕಾರಣರಾದರು. ಈ ವಚನಗಳು ಸ್ತ್ರೀ ಚರಿತ್ರೆಯನ್ನು ಕಟ್ಟಿಕೊಡುವ ಇತಿಹಾಸದ ಸಾಮಗ್ರಿಗಳಾಗಿವೆ’ ಎಂದರು.
‘ಕೆಳ ವರ್ಗದ ವಚನಕಾರ್ತಿಯರ ವಚನಗಳಲ್ಲಿ ಮೂಡಿಬಂದ ಬಂಡಾಯಪ್ರಜ್ಞೆ ನಿಜಕ್ಕೂ ರೋಮಾಂಚಕ. ಇದೇ ಕಾರಣಕ್ಕೆ ಆಧುನಿಕ ಕಾಲಘಟ್ಟದಲ್ಲಿಯೂ ಅವರ ವಚನಗಳು ಹೆಚ್ಚು ಪ್ರಸ್ತುತವಾಗಿವೆ’ ಎಂದರು.
ಸಾನ್ನಿಧ್ಯ ವಹಿಸಿದ್ದ ಗುರುಸಿದ್ಧ ಸ್ವಾಮಿಗಳು ಆಶೀರ್ವಚನ ನೀಡಿ, ಶ್ರಾವಣ ಮಾಸದುದ್ದಕ್ಕೂ ನಡೆಯುವ ಧಾರ್ಮಿಕ ಆಚರಣೆಗಳ ಮಹತ್ವವನ್ನು ತಿಳಿಸಿದರು.
ಸಾಹಿತಿ ಯ.ರು. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸುರೇಶ ಯಾದವ ಫೌಂಡಷನ್ ಅಧ್ಯಕ್ಷ ಸುರೇಶ ಯಾದವ ದಂಪತಿಯನ್ನು ಶ್ರೀಗಳು ಸನ್ಮಾನಿಸಿದರು. ಸಿದ್ಧನಗೌಡ ಚೋಬಾರಿ ಸ್ವಾಗತಿಸಿದರು. ಎ.ಕೆ. ಪಾಟೀಲ ನಿರೂಪಿಸಿದರು. ವಿ.ಕೆ. ಪಾಟೀಲ ವಂದಿಸಿದರು. ಕಾರಂಜಿಮಠದ ಸಂಗೀತ ಶಾಲೆಯ ಮಕ್ಕಳು ಮತ್ತು ಮಾತೃಮಂಡಳಿ ಸದಸ್ಯರು ಸಂಗೀತಸೇವೆ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.