ಪಾಲಬಾವಿ: ಮನೆ ಕಟ್ಟಡ ಕಾರ್ಯ ಮುಗಿದು ಮನೆ ಪ್ರವೇಶ ಮಾಡಬೇಕು ಎನ್ನುವಷ್ಟರಲ್ಲಿ ಬಿರುಗಾಳಿಗೆ ಚಾವಣಿ ಕಿತ್ತು ಹಾರಿಹೋದ ಘಟನೆ ಗ್ರಾಮದಲ್ಲಿ ಕಳೆದ ಬುಧವಾರ ನಡೆದಿದೆ.
ಗ್ರಾಮದ ಸುಶೀಲಾ ಮಹಾದೇವ ಕರೋಶಿ ಅವರ ಹೊಸ ಮನೆಗೆ ಈ ಹಾನಿ ಸಂಭವಿಸಿದೆ. ಬುಧವಾರ ಮಧ್ಯಾಹ್ನ ಬೀಸಿದ ಗಾಳಿ ಮತ್ತು ಮಳೆಗೆ ಮನೆಯ ಮೇಲಿನ ಚಾವಣಿ, ಪತ್ರೆಗಳೆಲ್ಲ ದೂರದ ಹೊಲದಲ್ಲಿ ಬಿದ್ದಿವೆ.
ಅವರು ಬಸವ ವಸತಿ ಯೋಜನೆಯಡಿ ಈ ಮನೆ ನಿರ್ಮಿಸಿಕೊಂಡಿದ್ದರು. ದಿಢೀರ್ ಬೀಸಿದ ಬಿರುಗಾಳಿಯಿಂದ ಈ ಗಟನೆ ನಡೆದಿದ್ದು, ಸುಮಾರು ₹ 70 ಸಾವಿರ ಹಾನಿಯಾಗಿದೆ ಎಂದು ಮಹಾದೇವ ಕರೋಶಿ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಗ್ರಾಮ ಪಂಚಾಯ್ತಿಯವರು, ಪಂಚಾಯ್ತಿ ಸದಸ್ಯರು, ಗ್ರಾಮ ಲೆಕ್ಕಾಧಿಕಾರಿಗಳು ಬಂದು ಪರಿಶೀಲಿಸಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.