ಹೊಸಪೇಟೆ: ಹಕ್ಕು ಪತ್ರ ನೀಡಬೇಕೆಂದು ಒತ್ತಾಯಿಸಿ ಇಲ್ಲಿನ 22ನೇ ವಾರ್ಡಿನ ಜನ ಶುಕ್ರವಾರ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಂತರ ಪೌರಾಯುಕ್ತೆ ಪಿ. ಜಯಲಕ್ಷ್ಮಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
‘ಸರ್ವೇ ನಂ. 123ರ ಆಶ್ರಯ ಕಾಲೊನಿ, ಗುರುಭವನದ ಹಿಂಭಾಗದಲ್ಲಿ 26 ವರ್ಷಗಳಿಂದ ಬಡ ಕುಟುಂಬಗಳು ಬದುಕುತ್ತಿವೆ. ಆದರೆ, ಇಲ್ಲಿಯವರೆಗೆ ಅವರಿಗೆ ಹಕ್ಕು ಪತ್ರಗಳನ್ನು ನೀಡಿಲ್ಲ. ಕೂಡಲೇ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಿದರು.
‘ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು. ಅದರ ನಂತರವಷ್ಟೇ ಅರ್ಹರಿಗೆ ಹಕ್ಕು ಪತ್ರಗಳನ್ನು ಕೊಡಬೇಕು. ಒಂದುವೇಳೆ ಶೀಘ್ರ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಉಪಚುನಾವಣೆ ಬಹಿಷ್ಕರಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ವಿಜಯನಗರ ಪ್ರಜಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ವೈ. ಗೋವಿಂದರಾಜ, ಪ್ರಧಾನ ಕಾರ್ಯದರ್ಶಿ ಹತ್ತಿ ಅಡಿವೆಪ್ಪ, ಆಶ್ರಯ ಕಾಲೊನಿಯ ಆರ್.ಜಿ. ಗೌಡ, ದೇವಪುತ್ರ, ಗನಿ ಸಾಬ್, ನಿಂಗಪ್ಪ, ಸುಲೋಚನಾ, ರೆಹಮತ್ ಇದ್ದರು.