ಹೊಸಪೇಟೆ: ತಾಲ್ಲೂಕಿನ ಹಂಪಿ ಹೇಮಕೂಟ ಮಹಾಸಂಸ್ಥಾನ ಗಾಯತ್ರಿ ಪೀಠದ ದಯಾನಂದ ಪುರಿ ಸ್ವಾಮೀಜಿ ನೇತೃತ್ವದಲ್ಲಿ ನೇಕಾರ ಸಮಾಜದವರು ಸೋಮವಾರ ಬಾದಾಮಿಯ ಬನಶಂಕರಿಗೆ ಪಾದಯಾತ್ರೆ ಕೈಗೊಂಡರು.
ನೂಲು ಹುಣ್ಣಿಮೆಯ ದಿನ ನೇಕಾರ ಸಮಾಜದ ಕುಲದೇವತೆ ಬನಶಂಕರಿ ಅಮ್ಮನಿಗೆ ಪೀತಾಂಬರ ಸೀರೆ ಸಮರ್ಪಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಅದರ ನಿಮಿತ್ತ ಸೀರೆ, ಹೊಸದಾಗಿ ತಯಾರಿಸಿದ ಪಲ್ಲಕ್ಕಿಯೊಂದಿಗೆ ಬನಶಂಕರಿಗೆ ಪ್ರಯಾಣ ಬೆಳೆಸಿದರು.
ಪಾದಯಾತ್ರೆಯು ವಿವಿಧ ಗ್ರಾಮಗಳ ಮೂಲಕ ಜ. 20ರಂದು ಬನಶಂಕರಿಗೆ ತಲುಪಲಿದೆ. 21ರಂದು ಪೂಜಾ ವಿಧಿ ವಿಧಾನಗಳು ನೆರವೇರಲಿವೆ.
‘ವರ್ಷದ ಮೊದಲ ನೂಲು ಕುಲದೇವತೆಗೆ ಸಮರ್ಪಿಸುವ ಸಂಪ್ರದಾಯ1904ರಲ್ಲಿ ಆರಂಭಗೊಂಡಿದೆ. ಅಂದಿನಿಂದ ಸತತವಾಗಿ ಇದನ್ನು ಆಚರಿಸಿಕೊಂಡು ಬರಲಾಗಿದೆ. ಈ ವರ್ಷ ಪಾದಯಾತ್ರೆಯಲ್ಲಿ ತೆರಳಿ, ಪೀತಾಂಬರ ಸೀರೆ ಸಮರ್ಪಿಸುತ್ತಿರುವುದು ವಿಶೇಷ’ ಎಂದು ದಯಾನಂದ ಪುರಿ ಸ್ವಾಮೀಜಿ ತಿಳಿಸಿದರು.
‘ನೂಲು ಹುಣ್ಣಿಮೆಯ ಪ್ರಯುಕ್ತ ಇದೇ 14ರಂದು ಹಂಪಿಯಿಂದ ನೇಕಾರರ ಕುಲದೈವ ಬಾದಾಮಿಯ ಬನಶಂಕರಿ ಅಮ್ಮನ ಸನ್ನಿಧಿ ವರೆಗೆ ಪಾದಯಾತ್ರೆ ಕೈಗೊಳ್ಳಲಾಗಿದೆ’ ಎಂದು ಹಂಪಿ ಹೇಮಕೂಟ ಮಹಾಸಂಸ್ಥಾನ ಗಾಯತ್ರಿ ಪೀಠದ ದಯಾನಂದ ಪುರಿ ಸ್ವಾಮೀಜಿ ತಿಳಿಸಿದರು.
ದೇವಾಂಗ ಸಮಾಜದ ಮುಖಂಡರಾದ ಪರಗಿ ಶ್ರೀಶೈಲಪ್ಪ, ಗೋಸಿ ಸತೀಶ, ಪರಗಿ ನಾಗರಾಜ, ಅಗಳಿ ಪಂಪಾಪತಿ, ಕಾಳಗಿ ಸುದರ್ಶನ, ಗಣಪತಿ, ಬ್ರಹ್ಮಾನಂದ, ಬಣ್ಣದ ಕೇಮಣ್ಣ, ಕೊಳಗದ ಗಣಪತಿ, ರವೀಂದ್ರ ಕಲಬುರ್ಗಿ, ಪಿ.ಆರ್. ಗಿರಿಯಪ್ಪ ಇದ್ದರು.