ಬೆಂಗಳೂರು: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಗುರು ಅವರ ಕುಟುಂಬಕ್ಕೆ ಬಿಬಿಎಂಪಿ ಸದಸ್ಯರು ತಮ್ಮ ಒಂದು ತಿಂಗಳ ಗೌರವಧನ ನೀಡಲು ನಿರ್ಧರಿಸಿದ್ದಾರೆ.
ಮೃತ ಯೋಧರಿಗೆ ಬಿಬಿಎಂಪಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಮೇಯರ್ ಗಂಗಾಂಬಿಕೆ ಅವರು ಈ ವಿಷಯ ತಿಳಿಸಿದರು.
‘198 ವಾರ್ಡ್ಗಳ ಸದಸ್ಯರು, ಸ್ಥಾಯಿ ಸಮಿತಿ ಅಧ್ಯಕ್ಷರು, ಮೇಯರ್/ ಉಪಮೇಯರ್ ಅವರ ಗೌರವಧನ ಒಟ್ಟು ಸೇರಿಸಿದರೆ ₹ 19 ಲಕ್ಷ ಆಗುತ್ತದೆ. ಮತ್ತೆ ₹ 1 ಲಕ್ಷವನ್ನು ಯಾವುದಾದರೂ ಮೂಲಗಳಿಂದ ಸಂಗ್ರಹಿಸಿ ಒಟ್ಟು ₹ 20 ಲಕ್ಷ ನೆರವು ನೀಡಲಾಗುತ್ತದೆ’ ಎಂದು ಅವರು ಹೇಳಿದರು.
‘ಈಗಾಗಲೇ ನಿರ್ಧಾರ ಕೈಗೊಂಡಿದ್ದೇವೆ. ಕೌನ್ಸಿಲ್ ಸಭೆಯಲ್ಲಿ ವಿಷಯ ಮಂಡಿಸಿ ಒಪ್ಪಿಗೆ ಪಡೆಯುತ್ತೇವೆ’ ಎಂದ ಅವರು, ’ಸದ್ಯ ಪಾಲಿಕೆ ಬಜೆಟ್ ಸಿದ್ಧತೆಯಲ್ಲಿ ನಿರತರಾಗಿದ್ದೇವೆ. ಬಜೆಟ್ ಮಂಡನೆಯ ಬಳಿಕ ಶೀಘ್ರವೇ ಗುರು ಕುಟುಂಬವನ್ನು ಪಾಲಿಕೆ ಸದಸ್ಯರ ನಿಯೋಗವೊಂದು ಭೇಟಿಯಾಗುವ ಬಗ್ಗೆ ಚಿಂತನೆಯಿದೆ’ ಎಂದರು.