ಬೆಂಗಳೂರು: ‘ಶಿವರಾಮ ಕಾರಂತರ ಪುಸ್ತಕಗಳನ್ನು ಮರುಮುದ್ರಿಸಬೇಕು’ ಎಂದು ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಹೇಳಿದರು.
ನಗರದಲ್ಲಿ ಭಾನುವಾರ ನಡೆದ ಶಿವರಾಮ ಕಾರಂತ ವೇದಿಕೆಯ ಬೆಳ್ಳಿ ಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಶಿವರಾಮ ಕಾರಂತರು ಸ್ವಾನುಭವವಿಲ್ಲದೆ ಯಾವುದನ್ನೂ ಬರೆಯುತ್ತಿರಲಿಲ್ಲ. ಸಾಹಿತ್ಯದ ಬಗ್ಗೆ ಹೆಚ್ಚು ಚರ್ಚಿಸುತ್ತಿರಲಿಲ್ಲ. ಸಮಾಜದ ಬಗ್ಗೆ ಆಲೋಚಿಸುತ್ತಿದ್ದರು. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬಿತ್ತುವುದು ಹೇಗೆ ಎಂದು ಚಿಂತಿಸುತ್ತಿದ್ದರು’ ಎಂದರು.
‘ಕಾರಂತರು ಹಾಗೂ ಅಡಿಗರು ಕರಾವಳಿಯ ರತ್ನಗಳು. ಹಳೇ ಮೈಸೂರು ಭಾಗದಲ್ಲಿ ಅವರಿಗೆ ಹೆಚ್ಚು ಪ್ರಾಮುಖ್ಯತೆ ಸಿಗಲಿಲ್ಲ’ ಎಂದರು.
‘ಅವರ ಜತೆ ಹಂಪಿಗೆ ಹೋಗಿದ್ದೆ. ಆಗ ಉಗ್ರ ನರಸಿಂಹ ದೇವಾಲಯ ಜೀರ್ಣೋದ್ಧಾರ ಮಾಡುತ್ತಿದ್ದರು. ಅದನ್ನು ನೋಡುತ್ತಿದ್ದಂತೆ ಕೆಂಡಾಮಂಡಲವಾದರು. ಪ್ರಧಾನಿಗೆ ಪತ್ರ ಬರೆದರು. ಈ ಕೆಲಸವನ್ನು ಕೂಡಲೇ ನಿಲ್ಲಿಸುವಂತೆ ಇಂದಿರಾ ಗಾಂಧಿ ಆದೇಶಿಸಿದರು’ ಎಂದರು.
ಹಿರಿಯ ವಿಮರ್ಶಕ ಬಿ.ವಿ.ಕೆದಿಲಾಯ ಅವರಿಗೆ ಸನ್ಮಾನ ಮಾಡಲಾಯಿತು. ಹಿರಿಯ ಪತ್ರಕರ್ತೆ ಆರ್.ಪೂರ್ಣಿಮಾ ಇದ್ದರು.