ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪರ ಪುರುಷನ ಜೊತೆ ಪತ್ನಿ: ಸಹಾಯ ಮಾಡಿದ್ದವನ ಹತ್ಯೆ

Published 6 ಫೆಬ್ರುವರಿ 2024, 18:22 IST
Last Updated 6 ಫೆಬ್ರುವರಿ 2024, 18:22 IST
ಅಕ್ಷರ ಗಾತ್ರ

ಬೆಂಗಳೂರು: ಬಾಗಲಗುಂಟೆ ಠಾಣೆ ವ್ಯಾಪ್ತಿಯಲ್ಲಿ ಹೇಮಂತ್ ಅವರನ್ನು ಕೊಲೆ ಮಾಡಲಾಗಿದ್ದು, ಕೃತ್ಯ ಎಸಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿ ಕಿರಣ್ (32) ಮತ್ತು ಸ್ನೇಹಿತ ಅಕ್ಷಯ್ (31) ಬಂಧಿತರು. ಇವರಿಬ್ಬರೂ ಸೇರಿ ಫೆ.4ರಂದು ರಾತ್ರಿ ಹೇಮಂತ್ ಅವರನ್ನು ಕೊಲೆ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

‘ಆರೋಪಿ ಕಿರಣ್ ವಿವಾಹಿತನಾಗಿದ್ದು, ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟ ಮಾಡುತ್ತಾನೆ. ಕೆಲ ವರ್ಷಗಳ ಹಿಂದೆ ಈತನಿಗೆ ಕೆಂಗೇರಿ ನಿವಾಸಿ ಹೇಮಂತ್ ಪರಿಚಯವಾಗಿತ್ತು. ಬಳಿಕ, ಇಬ್ಬರೂ ಸ್ನೇಹಿತರಾಗಿದ್ದರು. ಆಗಾಗ ಭೇಟಿಯಾಗುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

ಪತ್ನಿ ಹೋಗಿದ್ದರಿಂದ ಸಿಟ್ಟು: ‘ಹೇಮಂತ್‌ ಅವರ ಸ್ನೇಹಿತ ಮರಿಸ್ವಾಮಿಯು ಆರೋಪಿ ಕಿರಣ್‌ನ ಪತ್ನಿ ಜೊತೆ ಸ್ನೇಹ ಬೆಳೆಸಿದ್ದ. ನಂತರ, ಇಬ್ಬರ ನಡುವೆ ಸಲುಗೆ ಬೆಳೆದಿತ್ತೆಂದು ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

‘ಕಿರಣ್‌ನ ಪತ್ನಿಯು ಮನೆ ಬಿಟ್ಟು ಮರಿಸ್ವಾಮಿ ಜೊತೆ ಹೋಗಿದ್ದಾರೆ. ಇದಕ್ಕೆ ಹೇಮಂತ್ ಸಹಾಯ ಮಾಡಿದ್ದ. ಈ ವಿಷಯ ಗೊತ್ತಾಗಿ ಕಿರಣ್ ಸಿಟ್ಟಾಗಿದ್ದ. ಪತ್ನಿಗಾಗಿ ಹಲವೆಡೆ ಹುಡುಕಾಡಿದರೂ ಸುಳಿವು ಸಿಕ್ಕಿರಲಿಲ್ಲ.’

‘ಫೆ. 4ರಂದು ರಾತ್ರಿ ಹೇಮಂತ್‌ಗೆ ಕರೆ ಮಾಡಿದ್ದ ಕಿರಣ್, ಬಾಗಲಗುಂಟೆ ಬಳಿ ಕರೆಸಿಕೊಂಡಿದ್ದ. ಕಿರಣ್, ಅಕ್ಷಯ್ ಹಾಗೂ ಹೇಮಂತ್ ಒಟ್ಟಿಗೆ ಬಾರ್‌ಗೆ ಹೋಗಿ ಮದ್ಯ ಕುಡಿದಿದ್ದರು. ಬಾರ್‌ನಿಂದ ಹೊರಬಂದು, ಪಾಪಣ್ಣ ಬಡಾವಣೆಗೆ ಬಂದಿದ್ದರು. ‘ಪತ್ನಿ ಬಿಟ್ಟು ಹೋಗಲು ನೀನೇ ಕಾರಣ’ ಎಂದಿದ್ದ ಕಿರಣ್, ಅಕ್ಷಯ್ ಜೊತೆ ಸೇರಿ ಹೇಮಂತ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ’ ಎಂದು ಪೊಲೀಸರು ತಿಳಿಸಿದರು.

‘ಹಲ್ಲೆಯಿಂದ ಗಾಯಗೊಂಡಿದ್ದ ಹೇಮಂತ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದರು. ಫೆ. 5ರಂದು ರಾತ್ರಿ ಆಸ್ಪತ್ರೆಯಲ್ಲಿ ಹೇಮಂತ್ ಮೃತಪಟ್ಟಿದ್ದಾರೆ. ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ತನ್ನ ಪತ್ನಿ ಬೇರೆಯವರ ಜೊತೆ ಹೋಗಲು ಸಹಾಯ ಮಾಡಿದ್ದಕ್ಕಾಗಿ ಹೇಮಂತ್‌ನನ್ನು ಕೊಲೆ ಮಾಡಿದ್ದಾಗಿ ಕಿರಣ್ ಹೇಳಿಕೆ ನೀಡಿದ್ದಾನೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT