ಬೆಂಗಳೂರು: ‘ನಮ್ಮ ಮೆಟ್ರೊ’ ನೇರಳೆ ಮಾರ್ಗದಲ್ಲಿ ಟ್ರಿನಿಟಿ ನಿಲ್ದಾಣದ ಬಳಿ ಭಾನುವಾರ ಮಳೆಯಿಂದಾಗಿ ಹಳಿಗೆ ಮರದ ಕೊಂಬೆ ಮುರಿದು ಬಿದ್ದಿದೆ. ಇದರಿಂದ ಮೆಟ್ರೊ ರೈಲು ಸಂಚಾರ ವ್ಯತ್ಯಯಗೊಂಡಿತು.
ಟ್ರಿನಿಟಿ ನಿಲ್ದಾಣ–ಎಂ.ಜಿ. ರಸ್ತೆ ನಡುವೆ ಹಳಿಗಳ ಮೆಲೆ ಭಾನುವಾರ ರಾತ್ರಿ 7.25ರ ಹೊತ್ತಿಗೆ ಮರದ ಕೊಂಬೆ ಮುರಿದು ಬಿತ್ತು. ಇದರಿಂದ ಈ ಮಾರ್ಗದಲ್ಲಿ ಸುಮಾರು 20 ನಿಮಿಷ ಮೆಟ್ರೊ ಸಂಚಾರ ಸ್ಥಗಿತಗೊಂಡಿತು.
ಬಳಿಕ ಇಂದಿರಾನಗರ ಮೆಟ್ರೊ ನಿಲ್ದಾಣದಿಂದ ವೈಟ್ಫೀಲ್ಡ್ ಕಡೆಗೆ ಹಾಗೂ ಎಂ.ಜಿ. ರಸ್ತೆಯಿಂದ ಚಲ್ಲಘಟ್ಟ ಕಡೆಗೆ ಮೆಟ್ರೊ ಕಾರ್ಯಾಚರಣೆ ಆರಂಭವಾಯಿತು. ಇಂದಿರಾನಗರದಿಂದ ಎಂ.ಜಿ. ರಸ್ತೆವರೆಗೆ ಮೆಟ್ರೊ ರೈಲು ಇಲ್ಲದೇ ಪ್ರಯಾಣಿಕರು ಪರದಾಡುವಂತಾಯಿತು.
‘ಮರದ ಕೊಂಬೆಯನ್ನು ತೆರವುಗೊಳಿಸುವ ಕಾರ್ಯವನ್ನು ಬಿಎಂಆರ್ಸಿಎಲ್ ಸಿಬ್ಬಂದಿ ಮಾಡುತ್ತಿದ್ದಾರೆ. ತೆರವಾದ ಕೂಡಲೇ ಎಂ.ಜಿ. ರಸ್ತೆ– ಇಂದಿರಾನಗರ ನಡುವೆ ಮೆಟ್ರೊ ರೈಲು ಕಾರ್ಯಾಚರಣೆ ಆರಂಭಗೊಳ್ಳಲಿದೆ. ಪ್ರಯಾಣಿಕರಿಗಾದ ತೊಂದರೆಗೆ ಕ್ಷಮೆ ಕೇಳುತ್ತೇವೆ’ ಎಂದು ಬಿಎಂಆರ್ಸಿಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.