ಬೆಂಗಳೂರು: ಅಂಗವಿಕಲ ಅಭ್ಯರ್ಥಿ ಗಳಿಗೆ ನೇಮಕಾತಿ ಸಂಬಂಧ ಪ್ರಮಾಣಪತ್ರ ವಿತರಿಸುವ ವೇಳೆಯಲ್ಲಿ ವೈದ್ಯಾಧಿಕಾರಿಗಳು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಸುತ್ತೋಲೆ ಹೊರಡಿಸಿದ್ದಾರೆ.
ಕರ್ನಾಟಕ ನಾಗರಿಕ ಸೇವಾ ಹುದ್ದೆಗಳ ನೇಮಕಾತಿ ಸಂಬಂಧ ವಿತರಿಸುವ ಅಂಗವಿಕಲ ಪ್ರಮಾಣಪತ್ರಗಳಲ್ಲಿ ಅಂಗವಿಕಲತೆಯ ಸ್ವರೂಪ, ಪ್ರಮಾಣ ಹಾಗೂ ಶಾಶ್ವತ ಅಂಗವಿಕಲತೆಯೇ ಅಥವಾ ಗುಣಮುಖವಾಗುವ ಅಂಗವಿಕಲತೆಯೇ ಎಂಬುದನ್ನು ಸ್ಪಷ್ಟವಾಗಿ ನಮೂದಿಸಬೇಕು.
ಕೆಲವು ನಿರ್ದಿಷ್ಟ ಅಂಗವಿಕಲತೆಗಳಿಗೆ ಯಂತ್ರಗಳ ಮೂಲಕ ತಪಾಸಣೆ ಮಾಡಿ ವೈದ್ಯಕೀಯ ಪ್ರಮಾಣಪತ್ರಗಳನ್ನು ನೀಡಬೇಕಾಗುತ್ತದೆ. ಅಂತಹ ಪ್ರಕರಣಗಳಲ್ಲಿ ಯಂತ್ರೋಪಕರಣಗಳ ಮೂಲಕ ಅಂಗವಿಕಲತೆಯ ಪ್ರಮಾಣ ಖಚಿತಪಡಿಸಿಕೊಂಡ ನಂತರವೇ ನಿಖರವಾದ ಕಾರಣಗಳನ್ನು ನಮೂದಿಸಬೇಕು.
ಪ್ರಮಾಣಪತ್ರ ದಲ್ಲಿ ಅಂಗವಿಕಲತೆ ಶಾಶ್ವತವೇ ಅಥವಾ ತಾತ್ಕಾಲಿಕವೇ ಎಂಬುದನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಅವರು ಸೂಚಿಸಿದ್ದಾರೆ.