ಬೆಂಗಳೂರು: ಹದಿಮೂರು ಜನರಿಗೆ ಪಾಸ್ಪೋರ್ಟ್, ವೀಸಾ ಹಾಗೂ ವಿದೇಶದಲ್ಲಿ ಉದ್ಯೋಗ ಕೊಡಿಸುವ ಆಮಿಷ ಒಡ್ಡಿ ₹ 1.48 ಕೋಟಿ ವಂಚಿಸಿದ ಪ್ರಕರಣ ಆರ್.ಟಿ. ನಗರ ಠಾಣೆಯಲ್ಲಿ ದಾಖಲಾಗಿದೆ.
ಎಂ.ಜಿ. ರಸ್ತೆಯಲ್ಲಿರುವ ಓಷಿಯನ್ ಇಂಟರ್ನ್ಯಾಷನಲ್ ನಾವೆಲ್ ಆಫೀಸರ್ಸ್ ಸೆಂಟರ್ನ ನಿರ್ದೇಶಕನೆಂದು ಹೇಳಿಕೊಂಡಿದ್ದ ಶರತ್ಚಂದ್ರ ಎಂಬುವವರ ವಿರುದ್ಧ ಗಂಗಾನಗರದ ತೌಫಿಕ್ ಮೊಹ್ಮದ್ ಈ ದೂರು ನೀಡಿದ್ದಾರೆ.
‘ಸಿಂಗಪುರ, ಮಲೇಷ್ಯಾ, ಯುಎಇ, ಚೀನಾ ಮತ್ತಿತರ ದೇಶಗಳಲ್ಲಿ ಉದ್ಯೋಗ ಕೊಡಿಸುತ್ತೇನೆ ಎಂದು ಶರತ್ಚಂದ್ರ ನಿರುದ್ಯೋಗಿಗಳಿಗೆ ನಂಬಿಸಿದ್ದಾನೆ. ಎಂಟು ಜನರಿಗೆ ಉದ್ಯೋಗ ಕೊಡಿಸುವುದಾಗಿ ನನ್ನಿಂದ₹ 69.85 ಲಕ್ಷ, ಐದು ಮಂದಿಗೆ ಉದ್ಯೋಗ ಕೊಡಿಸುವುದಾಗಿನನ್ನ ಸ್ನೇಹಿತ ಅಬ್ದುಲ್ ಮುನೀರ್ ಎಂಬಾತನಿಂದ ₹ 78.35 ಲಕ್ಷ ಹಣ ಪಡೆದಿದ್ದಾನೆ. ಅಷ್ಟೂ ಹಣವನ್ನು ಗೂಗಲ್ ಪೇ ಮೂಲಕ ತನ್ನ ಖಾತೆಗೆ ಜಮೆ ಮಾಡಿಕೊಂಡಿದ್ದಾನೆ’
‘2019ರ ಆಗಸ್ಟ್ 20ರಂದು ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದು ಎಲ್ಲ 13 ಮಂದಿಯ ಉದ್ಯೋಗ ನೇಮಕಾತಿ ಪತ್ರ, ಪಾಸ್ಪೋರ್ಟ್, ವೀಸಾ ಪಡೆದುಕೊಳ್ಳುವಂತೆ ನನಗೆ ತಿಳಿಸಿದ್ದ. ಆದರೆ, ಅಂದು ಅಲ್ಲಿಗೆ ಆತ ಬಂದಿರಲಿಲ್ಲ. ಅಲ್ಲದೆ, ಅಂದಿನಿಂದ ತಲೆಮರೆಸಿಕೊಂಡಿದ್ದಾನೆ. ಎಂ.ಜಿ. ರಸ್ತೆಯಲ್ಲಿದ್ದ ಆತನ ಕಚೇರಿ ಕೂಡಾ ಮುಚ್ಚಿದೆ’ ಎಂದು ದೂರಿನಲ್ಲಿ ತೌಫೀಕ್ ತಿಳಿಸಿದ್ದಾರೆ.
ಆರೋಪಿ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.