‘ಅಲ್ಪಸಂಖ್ಯಾತ ಕಾಲೋನಿ ಅಭಿವೃದ್ಧಿಗೆ ಸಾವಿರ ಕೋಟಿ ಅನುದಾನದ ಮೀಸಲಿಡುವುದು ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಅಲ್ಲ. ಕಮಿಷನ್ ಹೊಡೆಯಲು’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು. ‘ದಂಧೆಗೆ ಅನುಕೂಲ ಆಗುತ್ತದೆ ಎನ್ನುವ ಕಾರಣಕ್ಕೆ ಈ ಅನುದಾನದ ನಾಟಕವಷ್ಟೇ. ಅವರಿಗೆ ಪರ್ಸಂಟೇಜ್ ಎಷ್ಟು ಬರುತ್ತೆ ಎಂಬುದು ಜಗಜ್ಜಾಹೀರಾಗಿದೆ. ಅವರನ್ನು ಓಲೈಸಿಕೊಳ್ಳಲು ಹಾಗೂ ಅವರ ಹಿಂದೆ ನಿಂತುಕೊಳ್ಳುವವರ ಸಂತೃಪ್ತಿಗಾಗಿ ಈ ಹಣ ಮೀಸಲಿಟ್ಟಿದ್ದಾರೆಯೇ ಹೊರತು ಸಮುದಾಯದ ಅಭಿವೃದ್ಧಿಗಾಗಿ ಅಲ್ಲ’ ಎಂದು ಟೀಕಿಸಿದರು.
‘ಕೆಲವರನ್ನ ಖುಷಿಪಡಿಸಲು ತಾತ್ಕಾಲಿಕವಾಗಿ ಈ ರೀತಿಯ ಘೋಷಣೆ ಮಾಡುತ್ತಾರೆ. ಅದು ಯಾವುದೂ ಜಾರಿಗೆ ಬರುವುದಿಲ್ಲ. ಹಿಜಾಬ್ ವಿಚಾರವಾಗಿ ಮೈಸೂರಿನಲ್ಲಿ ಹೇಳಿಕೆ ನೀಡಿ ಪುನಃ ವಾಪಸ್ ಪಡೆದರು. ಹುಬ್ಬಳ್ಳಿಯಲ್ಲಿ ಮುಸ್ಲಿಮರಿಗೆ ₹10000 ಕೋಟಿ ಅನುದಾನ ಘೋಷಿಸಿದರು. ಅವರ ಬಳಿ ಹಣ ಎಲ್ಲಿದೆ? ಅವರ ಹಿಂದೆ ಇರುವವರನ್ನು ಉದ್ಧಾರ ಮಾಡಲು ಹಣ ಕೊಡುತ್ತಿದ್ದಾರೆ ಅಷ್ಟೆ’ ಎಂದರು.