ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಎಲ್) ಬ್ಯಾಗೇಜ್ಗಳನ್ನು ಸ್ವಯಂಚಾಲಿತವಾಗಿ ಚೆಕ್ ಇನ್ ಮಾಡುವ ಸೆಲ್ಫ್ ಬ್ಯಾಗ್ ಡ್ರಾಪ್ ವ್ಯವಸ್ಥೆ ಸೌಲಭ್ಯ ಬಳಸಿಕೊಂಡ ಪ್ರಯಾಣಿಕರ ಸಂಖ್ಯೆ ಐದು ಲಕ್ಷ ದಾಟಿದೆ.
ನಿತ್ಯ ಸುಮಾರು 2,500 ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿದ್ದಾರೆ.2018ರಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಸದ್ಯ, ಏರ್ ಏಷ್ಯಾ ಮತ್ತು ಸ್ಪೈಸ್ಜೆಟ್ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಈ ಸೌಲಭ್ಯ ಲಭ್ಯವಿದೆ.
ಕೇವಲ 45 ಸೆಕೆಂಡ್ಗಳಲ್ಲಿ ಬ್ಯಾಗೇಜ್ಗಳನ್ನು ಸಂಪೂರ್ಣವಾಗಿ ಚೆಕ್ಇನ್ ಮಾಡುವ ವ್ಯವಸ್ಥೆ ಇದಾಗಿದೆ. ಈ ವ್ಯವಸ್ಥೆಯನ್ನು ದೊಡ್ಡ ಪ್ರಮಾಣದಲ್ಲಿ ಪರಿಚಯಿಸಿದ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಬೆಂಗಳೂರು ವಿಮಾನ ನಿಲ್ದಾಣ ಪಾತ್ರವಾಗಿದೆ.
ಶೇ 70 ರಷ್ಟು ಬೆಳವಣಿಗೆ: ಕಳೆದ ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ ಈ ನಿಲ್ದಾಣದಿಂದ 5,620 ಟನ್ಗಳಷ್ಟು ಕೊತ್ತಂಬರಿ ಸೊಪ್ಪನ್ನು ರಫ್ತು ಮಾಡಲಾಗಿದೆ.ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಪ್ರಮಾಣದಲ್ಲಿ ಶೇ 70ರಷ್ಟು ಬೆಳವಣಿಗೆಯಾಗಿದೆ ಎಂದು ಕೆಐಎಎಲ್ ತಿಳಿಸಿದೆ.
ತಾಜಾ ಮತ್ತು ವಿಶಿಷ್ಟ ಸ್ವಾದದ ಸೊಪ್ಪಿನ ಎಲೆಗಳನ್ನು ಭಾರತದಲ್ಲಿ 13 ರಾಜ್ಯಗಳಿಗೆ ರವಾನಿಸಲಾಗಿದೆ ಯಲ್ಲದೆ, ಶ್ರೀಲಂಕಾಗೂ ಕಳುಹಿಸಲಾಗಿದೆ. ದೆಹಲಿಗೆ 29.26 ಲಕ್ಷ ಕೆಜಿ ಹಾಗೂ ಕೋಲ್ಕತ್ತಗೆ 12.18 ಲಕ್ಷ ಕೆಜಿ ಕೊತ್ತಂಬರಿ ಸೊಪ್ಪನ್ನು ರವಾನಿಸಲಾಗಿದೆ.