ಬೆಂಗಳೂರು: ‘ಕರ್ನಾಟಕದ ನಂಜನಗೂಡು– ಕೇರಳದ ನೀಲಾಂಬುರ್ ರೈಲ್ವೆ ಯೋಜನೆ ರದ್ದುಪಡಿಸಬೇಕು’ ಎಂದು ಆಗ್ರಹಿಸಿ ಸ್ವಯಂ ಜಾಗೃತಿ ಸೇವಾ ಟ್ರಸ್ಟ್ ಪದಾಧಿಕಾರಿಗಳು ಬೆಂಗಳೂರು ವಿಶ್ವವಿದ್ಯಾಲಯದ ಗಾಂಧಿಭವನ ಬಳಿ ಭಾನುವಾರ ಪ್ರತಿಭಟನೆ ನಡೆಸಿದರು.
ಯೋಜನೆಯನ್ನು ಖಂಡಿಸಿರುವ ಹಲವರು, ‘ಬಂಡೀಪುರ ಉಳಿಸಿ’ ಅಭಿಯಾನಕ್ಕೆ ಕರೆ ನೀಡಿದ್ದಾರೆ. ಇದಕ್ಕೆ ಬೆಂಬಲ ವ್ಯಕ್ತಪಡಿಸಿರುವ ರಾಜ್ಯದ ಹಲವು ಸಂಘಟನೆಗಳು, ಯೋಜನೆ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿವೆ.
ಬೆಂಗಳೂರು ವಿಶ್ವವಿದ್ಯಾಲಯದ ಗಾಂಧಿಭವನದ ಬಳಿ ಪ್ರತಿಭಟನೆ ಹಮ್ಮಿಕೊಂಡಿದ್ದ ಸ್ವಯಂ ಜಾಗೃತಿ ಸೇವಾ ಟ್ರಸ್ಟ್ ಪದಾಧಿಕಾರಿಗಳು, ಪತ್ರಗಳನ್ನು ಬರೆದು ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿ ಅವರಿಗೆ ಕಳುಹಿಸಿದರು.
‘ಯೋಜನೆ ಹೆಸರಿನಲ್ಲಿ ಕಾಡು ನಾಶ ಮಾಡುವ ಹುನ್ನಾರವಿದೆ. ಯೋಜನೆಯಿಂದ ಕಾಡು ಪ್ರಾಣಿಗಳಿಗೆ ತೊಂದರೆ ಉಂಟಾಗಲಿದೆ. ಮಾನವ – ಪ್ರಾಣಿ ಸಂಘರ್ಷಗಳಿಗೂ ಯೋಜನೆ ಕಾರಣವಾಗಲಿದೆ’ ಎಂದು ಪ್ರತಿಭಟನಕಾರರು ದೂರಿದರು.
‘ರೈಲ್ವೆ ಯೋಜನೆ ರದ್ದುಪಡಿಸಬೇಕು. ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧಿಸಬೇಕೆಂದು ಆಗ್ರಹಿಸಿ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿದೆ’ ಎಂದೂ ಹೇಳಿದರು.